ಯಾದಗಿರಿ: ಮುಂದಿನ ವರ್ಷದ ಫೆಬ್ರವರಿ ತಿಂಗಳ 8, 9ರಂದು ಮಠದ ಜಾತ್ರೆ ಇದೆ. ಅದೇ ಜಾತ್ರೆಯಲ್ಲಿ ಮೀಸಲಾತಿ ಘೋಷಣೆಯಾಗಬೇಕು. 7.5% ಮೀಸಲಾತಿ ಶೀಘ್ರವಾಗಿ ಜಾರಿಯಾಗದಿದ್ದರೆ ನಮ್ಮ ಸಮಾಜದ 15 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಅಂತ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಯಾದಗಿರಿಯ ಸರ್ಕಿಟ್ ಹೌಸ್ ನಲ್ಲಿ ಜಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಿ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಅವರು, ಬಿಜೆಪಿ ನಮ್ಮ ಸಮುದಾಯದ ಶಾಸಕರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಭರವಸೆ ನೀಡಿ ಹೈಜಾಕ್ ಮಾಡಿದೆ. ಆದರೆ ಸ್ಥಾನ ನೀಡಲು ಯಾಕೆ ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಸಮಾಜದ ಸಚಿವರರಿಗೆ ಡಿಸಿಎಂ ಸ್ಥಾನ ನೀಡಲೇ ಬೇಕು ಮತ್ತು ಸುರಪುರದ ಶಾಸಕ ರಾಜೂಗೌಡರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಮರ್ಯಾದೆ ಪುರುಷ ಶ್ರೀರಾಮನ ಚರಿತ್ರೆಯನ್ನು ಜಗತ್ತಿಗೆ ಹೇಳಿದವರು ಮಹರ್ಷಿ ವಾಲ್ಮೀಕಿ. ಹೀಗಾಗಿ ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣ ಮಾಡಬೇಕು ಮತ್ತು ಹಂಪಿ ವಿವಿಗೆ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಅಂತ ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ಅನ್ನ ಕುಟಿರ ಪ್ರಸ್ತಾವನೆಯನ್ನು ನಾನು ಸ್ವಾಗತಿಸುತ್ತೆನೆ. ಹೀಗಿರುವಾಗ ಇಂದಿರಾ ಕ್ಯಾಂಟಿನ್ ಗಳಿಗೆ ಅದೇ ಹೆಸರು ಇರಲಿ. ಆದರೆ ಇನ್ನು ಮುಂದೆ ನಿರ್ಮಾಣ ಮಾಡುವ ಕ್ಯಾಂಟಿನ್ ಗಳಿಗೆ ವಾಲ್ಮೀಕಿ ಅನ್ನ ಕುಟಿರ ಎಂದು ನಾಮಕರಣ ಮಾಡಬೇಕು ಎಂದರು.