ಯಾದಗಿರಿ: ಕಳೆದ ಆಗಷ್ಟ್ ತಿಂಗಳಲ್ಲಿ ಬಂದಿದ್ದ ನೆರೆಪ್ರವಾಹದ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ, ವಿದ್ಯುತ್ ಸಮಸ್ಯೆ ಗ್ರಾಮಗಳಿಗೆ ಬೆಳಕಿನ ಸೌಲಭ್ಯ ಕಲ್ಪಿಸಲು ಕಾರಣಿಭೂತರಾಗಿದ್ದ ಲೈನ್ಮ್ಯಾನ್ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಯುವ ಬ್ರಿಗೇಡ್ ಸಹಯೋಗದಲ್ಲಿ ಶಕ್ತಿಮಾನ್ ಲೈನ್ಮ್ಯಾನ್ಗಳಿಗೆ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಹಾಗೂ ಜೆಸ್ಕಾಂ ಅಧಿಕಾರಿ ಹಾಗೂ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಪ್ರವಾಹ ಸಂದರ್ಭದಲ್ಲಿ ಕಷ್ಟನಷ್ಟಗಳ ನಡುವೆ ಯಾದಗಿರಿ ಜಿಲ್ಲೆಯಲ್ಲಿ ಲೈನ್ಮ್ಯಾನ್ಗಳು ಉತ್ತಮ ಸೇವೆ ಸಲ್ಲಿಸಿ ವಿದ್ಯುತ್ ಸಮಸ್ಯೆಯಾಗದಂತೆ ಕಾಳಜಿ ವಹಿಸಿದ್ದು ಮೆಚ್ಚುವಂತದ್ದು ಎಂದರು.
ಇದೇ ವೇಳೆ ಪುಲ್ವಾಮ ದಾಳಿ ವೇಳೆ ಹುತಾತ್ಮ ಯೋಧರ ಕಾರ್ಯ ಕೊಂಡಾಡಿದ ಸೂಲಿಬೆಲೆ, ಪುಲ್ವಾಮ ದಾಳಿ ಬಗ್ಗೆ ಕೇವಲ ಶೋಕಾಚರಣೆ ಮಾಡಿದ್ರೆ ಸಾಲದು, ಪಾಕಿಸ್ತಾನ ನೆಲದಲ್ಲಿ ಸರ್ಜಿಕಲ್ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿದ ಯೋಧರ, ಶೌರ್ಯ ಕಾರ್ಯ ಶ್ಲಾಘಿಸುವ ಕೆಲಸವಾಗಬೇಕು ಎಂದು ತಿಳಿಸಿದರು.