ಉಡುಪಿ: ಪೂರ್ವ ಕರಾವಳಿಯಲ್ಲಿ ಎದ್ದಿರುವ ಯಾಸ್ ಚಂಡಮಾರುತ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆ ಹೊತ್ತು ತಂದಿದೆ. ಜಿಲ್ಲೆಯ ಕೆಲವೆಡೆ ಮಳೆ ಆಗಿದೆ.
ಪೂರ್ವ ಕರಾವಳಿಯಲ್ಲಿ ಹುಟ್ಟಿರುವ ಚಂಡಮಾರುತ ಪಶ್ಚಿಮದ ಜಿಲ್ಲೆಗಳಲ್ಲೂ ತಂಪೆರೆದಿದೆ. ಜಿಲ್ಲೆಯ ಕಾರ್ಕಳ ಹೆಬ್ರಿ ಭಾಗಗಳಲ್ಲಿ ಮುಂಜಾನೆಯ ಧಾರಾಕಾರ ಮಳೆ ಬಿದ್ದಿದೆ. ಮಧ್ಯಾಹ್ನ ಸುಮಾರಿಗೆ ಉಡುಪಿ ನಗರ ಭಾಗದ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕುಂದಾಪುರ ಕಾಪು ತಾಲೂಕಿನ ಕೆಲವು ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ.
ಮೋಡ ಮುಸುಕಿದ ವಾತಾವರಣವಿದ್ದು, ಜಿಲ್ಲೆಯಲ್ಲಿ ಮುಂದಿನ ಒಂದೆರಡು ದಿನಗಳ ಕಾಲ ಸಾಧಾರಣ ಗಾಳಿ ಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಒಂದು ವಾರಗಳ ಕಾಲ ಬಿಟ್ಟು ಬಿಟ್ಟು ಮಳೆ ಬರುತ್ತದೆ. ಬಿಸಿಲು ಮತ್ತು ಮಳೆ ಇಂದು ಉಡುಪಿ ಜಿಲ್ಲೆಯಾದ್ಯಂತ ಕಂಡುಬಂತು.
ವಾರದ ಹಿಂದೆ ಅರಬ್ಬೀ ಸಮುದ್ರದಲ್ಲಿ ಎದ್ದ ತೌಕ್ತೆ ಚಂಡಮಾರುತ ಭಾರೀ ಮಳೆ ತಂದಿತ್ತು. ಸುಮಾರು 68 ಕೋಟಿ ರುಪಾಯಿ ನಷ್ಟ ಉಂಟುಮಾಡಿತ್ತು. ತೌಕ್ತೆ ಬೆನ್ನಲ್ಲೇ ಯಾಸ್ ಅಪ್ಪಳಿಸಿದ್ದು, ಜೂನ್ ಮೊದಲ ವಾರದ ನಂತರ ಮುಂಗಾರು ಆರಂಭ ಆಗಬಹುದು.