ಬೆಂಗಳೂರು: ಕಾಂಗ್ರೆಸ್ನಲ್ಲಿ ಸಚಿವ ಸ್ಥಾನಕ್ಕಾಗಿ ಶಾಸಕರು ಪತ್ರ ಬರೆದಿರೋದು ಬಂಡಾಯದ ಸೂಚನೆ ಅಂತ ಬಿಜೆಪಿ (BJP) ಮಾಜಿ ಸಚಿವ ರೇಣುಕಾಚಾರ್ಯ (Renukacharya) ಲೇವಡಿ ಮಾಡಿದ್ದಾರೆ.
ಹೊನ್ನಾಳಿಯಲ್ಲಿ ನಡೆಯಲಿರೋ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಭೇಟಿ ಮಾಡಿ ಆಹ್ವಾನ ನೀಡಿದರು. ಈ ವೇಳೆ ಶಾಸಕರ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನ ಕೊಡಿ ಅಂತ ಪತ್ರ ಬರೆಯೋ ಪದ್ಧತಿ ಇರಲಿಲ್ಲ. ನಾನು ಅನೇಕ ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. 6-7 ಜನ ಸಿಎಂರನ್ನ ನೋಡಿದ್ದೇನೆ. ಸಿಎಂಗಳ ಜೊತೆ ಕೆಲಸ ಮಾಡಿದ್ದೇವೆ. ಹೊಸದಾಗಿ ಶಾಸಕರಾಗಿರೋರು ಪತ್ರ ಬರೆದಿದ್ದಾರೆ. ಸಚಿವ ಸ್ಥಾನಕ್ಕಾಗಿ ಪತ್ರ ಬರೆಯೋ ಪದ್ಧತಿ ಇಲ್ಲ. ಇದು ಕಾಂಗ್ರೆಸ್ನ ಬಂಡಾಯಕ್ಕೆ ಕೈಗನ್ನಡಿ. ಪತ್ರ ಬರೆದು ಸಚಿವ ಸ್ಥಾನ ಕೇಳೋದು ದೊಡ್ಡ ಬಂಡಾಯ. ಇವರ ಬಂಡಾಯ ಯಾವ ಸಮಯದಲ್ಲಿ ಬೇಕಾದ್ರು ಸ್ಫೋಟ ಆಗಬಹುದು ಅಂತ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ:ಕುರಿ ಕಾಯುವವರನ್ನ ಕುರಿಗಾಹಿಗಳ ನಿಗಮಕ್ಕೆ ಅಧ್ಯಕ್ಷನಾಗಿ ಮಾಡಬೇಕು – ಸಿಎಂಗೆ ಕುರಿಗಾಹಿಗಳ ಮನವಿ
ವೀರಪ್ಪ ಮೊಯ್ಲಿ ಕಾಲದಲ್ಲಿ ದೊಡ್ಡ ಸ್ಫೋಟ ಆಗಿತ್ತು. ಈಗಲೂ ಸಹ ಅದಕ್ಕಿಂತ ದೊಡ್ಡದಾದ ಭಿನ್ನಮತ, ಕುರ್ಚಿ ಕದನ ಸ್ಫೋಟ ಆಗುತ್ತದೆ. ರಾಜ್ಯದ ಜನರಿಗೆ ಇದು ಮನರಂಜನೆ ಆಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಕುರ್ಚಿ ಕಲಹದಲ್ಲಿ ಯಾರ್ ಸಿಎಂ ಆಗ್ತಾರೆ ಅವರ ಪಕ್ಷದ ವಿಚಾರ. ದಲಿತ ಸಿಎಂ, ಸಿಎಂ ಆಗಿ ಮುಂದುವರೆಯೋ ವಿಚಾರ ಅವರ ಪಕ್ಷದ ವಿಚಾರ. ಡಿಕೆ ಶಿವಕುಮಾರ್ ಕಡೆಯವರು ಸಿಎಂ ಆಗಬೇಕು ಅಂತ ಲಾಬಿ ಮಾಡ್ತಾ ಇದ್ದಾರೆ. ಅವರ ಹೈಕಮಾಂಡ್ ತೀರ್ಮಾನ ಮಾಡಲಿ. ಆದ್ರೆ ರಾಜ್ಯದ ಅಭಿವೃದ್ಧಿ ಕಡೆ ಇವರು ಗಮನ ಕೊಡಲಿ ಅಂತ ವಾಗ್ದಾಳಿ ನಡೆಸಿದ್ದಾರೆ.

