ನವದೆಹಲಿ: ಪ್ರತ್ಯೇಕತಾವಾದಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪಗಳು ಹಾಸ್ಯಮಯವಾಗಿವೆ ಎಂದು ತಳ್ಳಿಹಾಕಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮನ್ನು ತಾವು ʼವಿಶ್ವದ ಸಿಹಿ ಭಯೋತ್ಪಾದಕʼ ಎಂದು ಕರೆದುಕೊಂಡಿದ್ದಾರೆ.
ಪಂಜಾಬ್ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಹಾಗೂ ಬಿಜೆಪಿ ಟೀಕಾಪ್ರಹಾರ ನಡೆಸಿವೆ. ತಾನು ಪ್ರತ್ಯೇಕ ರಾಜ್ಯದ ಪ್ರಧಾನಿಯಾಗುವ ಬಗ್ಗೆ ಹೇಳಿಕೆ ನೀಡಿದ್ದಾರೆಂದು ಆರೋಪಿಸಲಾಗಿದೆ. ಆದರೆ ಈ ಆರೋಪಗಳನ್ನು ತಳ್ಳಿಹಾಕಿರುವ ಕೇಜ್ರಿವಾಲ್, ಕಾಂಗ್ರೆಸ್ ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ: ಚರಣ್ಜಿತ್ ಸಿಂಗ್ ಚನ್ನಿ
ಅವರೆಲ್ಲ ನನ್ನ ವಿರುದ್ಧ ಗುಂಪು ಕಟ್ಟಿಕೊಂಡು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಇದು ನನ್ನಲ್ಲಿ ನಗು ತರಿಸುತ್ತೆ. ನಾನು ಭಯೋತ್ಪಾದಕ ಆಗಿದ್ದಲ್ಲಿ ಪ್ರಧಾನಿ ಮೋದಿ ಅವರು ನನ್ನನ್ನು ಏಕೆ ಬಂಧಿಸಿಲ್ಲ ಎಂದು ಕೇಜ್ರಿವಾಲ್ ಟಾಂಗ್ ನೀಡಿದ್ದಾರೆ.
ಶಾಲೆಗಳು, ಆಸ್ಪತ್ರೆಗಳು, ವಿದ್ಯುತ್, ರಸ್ತೆಗಳು, ನೀರು ಒದಗಿಸುವ ಭಯೋತ್ಪಾದಕ. ನಾನು ವಿಶ್ವದ ಸಿಹಿ ಭಯೋತ್ಪಾದಕ ಎಂದು ಕೇಜ್ರಿವಾಲ್ ತನ್ನನ್ನು ತಾನು ಬಣ್ಣಿಸಿಕೊಂಡಿದ್ದಾರೆ.
ಕುಮಾರ್ ವಿಶ್ವಾಸ್ ಅವರ ವೀಡಿಯೋ ಆಧರಿಸಿ ಕೇಜ್ರಿವಾಲ್ ವಿರುದ್ಧ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ವಾಗ್ದಾಳಿ ನಡೆಸಿದ್ದಾರೆ. ಎಎಪಿ ಸಂಸ್ಥಾಪಕ ಸದಸ್ಯರಾಗಿರುವ ವಿಶ್ವಾಸ್, ಒಮ್ಮೆ ಕೇಜ್ರಿವಾಲ್ ಅವರು ಪಂಜಾಬ್ನ ಸಿಎಂ ಆಗಬೇಕು ಅಥವಾ ಸ್ವತಂತ್ರ್ಯ ರಾಷ್ಟ್ರದ (ಖಲಿಸ್ತಾನ) ಪ್ರಧಾನಿಯಾಗಬೇಕೆಂದು ಹೇಳಿದ್ದರು ಎಂದು ವೀಡಿಯೋದಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಕಿರುಕುಳ ಎದುರಿಸುತ್ತಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ಈ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಎಲ್ಲರೂ ನನ್ನ ವಿರುದ್ಧ ಇದ್ದಾರೆ. ಕೇಜ್ರಿವಾಲ್ ಅವರು ದೇಶವನ್ನು ಒಡೆಯಲು ಸಂಚು ಮಾಡುತ್ತಿದ್ದಾರೆ. ಸ್ವತಂತ್ರ್ಯ ರಾಷ್ಟ್ರದ ಪ್ರಧಾನಿಯಾಗುತ್ತಾನೆ ಎಂದು ಹೇಳುತ್ತಿದ್ದಾರೆ. ಇದರರ್ಥ ನಾನೊಬ್ಬ ದೊಡ್ಡ ಭಯೋತ್ಪಾದಕ. ಹಾಗಾದರೆ ಅವರ ಭದ್ರತಾ ಏಜೆನ್ಸಿಗಳು ಏನು ಮಾಡುತ್ತಿದ್ದವು? ದೇಶದ ದೊಡ್ಡ ಪಕ್ಷಗಳು ದೇಶದ ಭದ್ರತೆಯನ್ನು ಅಪಹಾಸ್ಯ ಮಾಡುತ್ತಿವೆ ಎಂದು ತಿರುಗೇಟು ನೀಡಿದ್ದಾರೆ.
ಭಗತ್ಸಿಂಗ್ ಹೆಸರನ್ನು ಉಲ್ಲೇಖಿಸಿ ಮಾತನಾಡಿರುವ ಕೇಜ್ರಿವಾಲ್, ಭಯೋತ್ಪಾದಕರಲ್ಲಿ ಎರಡು ವಿಧಗಳಿವೆ. ಒಂದು ಜನರಲ್ಲಿ ಭಯ ಹುಟ್ಟಿಸುತ್ತದೆ. ಮತ್ತೊಂದು ಭ್ರಷ್ಟರಲ್ಲಿ ಭಯ ಭಯ ಹುಟ್ಟಿಸುತ್ತದೆ. ಇಂದು ಎಲ್ಲ ಭ್ರಷ್ಟರು ಸೇರಿ ನನ್ನ ವಿರುದ್ಧ ಒಗ್ಗಟ್ಟಾಗಿದ್ದಾರೆ. ಅವರು ನಿದ್ದೆಯಿಲ್ಲದ ರಾತ್ರಿಗಳನ್ನು ಕಂಡಿದ್ದಾರೆ. ಅವರು ನನ್ನ ಬಗ್ಗೆ ಕನಸು ಕಾಣುತ್ತಾರೆ. 100 ವರ್ಷಗಳ ಹಿಂದೆ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಕರೆಯಲಾಗಿತ್ತು. ಈಗ ಭಗತ್ ಸಿಂಗ್ ಅನುಯಾಯಿಯನ್ನು ಭಯೋತ್ಪಾದಕ ಎನ್ನುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಎಎಪಿ ವಿರುದ್ಧ ಎಲ್ಲಾ ಪಕ್ಷಗಳು ಒಂದಾಗಿವೆ. ಎಎಪಿ ಅಧಿಕಾರಕ್ಕೆ ಬರದಂತೆ ತಡೆಯಲು ಪ್ರಯತ್ನಿಸುತ್ತಿವೆ ಎಂದು ಟೀಕಿಸಿದ್ದಾರೆ.