ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಶ್ವ ಮಾತೃಭಾಷಾ ದಿನ ಕಾರ್ಯಕ್ರಮ

Public TV
2 Min Read
YV Gundurao 2

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಧಿಕಾರದಿಂದ ವಿಶ್ವಮಾತೃಭಾಷಾ ದಿನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖಾತ್ಯ ವಾಗ್ಮಿ ವೈ.ವಿ.ಗುಂಡೂರಾವ್ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿ, ಭಾಷೆ ಎಂಬುದು ಹೃದಯ ಹಾಗೂ ಕರುಳಿಗೆ ಸಂಬಂಧಿಸಿರುವುದರಿಂದಲೇ ಅದು ನಮ್ಮ ಮಾತೃಭಾಷೆಯಾಗಿದೆ ಎಂದು ತಿಳಿಸಿದರು.

ಮಾತೃಭಾಷೆಯ ಮೇಲಿನ ಪ್ರೀತಿಯಿಂದ ಅನ್ಯಭಾಷೆಗಳನ್ನು ದ್ವೇಷಿಸುವುದು ಸರಿಯಲ್ಲ. ಮಾತೃಭಾಷೆಗೆ ತಾಯಿ ಸ್ಥಾನ ನೀಡುವುದರ ಮೂಲಕ ಅದಕ್ಕೆ ಪ್ರಥಮ ಆದ್ಯತೆ ನೀಡಬೇಕು. ಉಳಿದ ಭಾಷೆಗಳು ಕುಟುಂಬದ ಇತರ ಸದಸ್ಯರಿದ್ದಂತೆ. ಹೀಗಾಗಿ ಅವುಗಳ ಮೇಲೆಯೂ ನಾವು ಪ್ರೀತಿ ಇಟ್ಟುಕೊಂಡು ಗೌರವಿಸಬೇಕು ಎಂದರು. ಇದನ್ನೂ ಓದಿ: ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲಿ ಹುಂಡಿ ಕಾಣಿಕೆ ಎಣಿಕೆ-56 ಲಕ್ಷ ಹಣ ಸಂಗ್ರಹ

YV Gundurao 1

ಕನ್ನಡ ನಾಡಿನಲ್ಲಿ ನೆಲೆಸಿರುವ ಎಲ್ಲರು ಕನ್ನಡಿಗರು. ಮಾತೃಭಾಷೆ ಎಂದರೆ ನೆಲದ ಭಾಷೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಕನ್ನಡ ಎಂದರೆ ಕೇವಲ ವರ್ಣಮಾಲೆಯಿಂದ ರೂಪಿತವಾದ ಪದಗಳ ಜೋಡಣೆ ಅಲ್ಲ. ಅದು ನಮ್ಮ ಸಂಸ್ಕೃತಿ ಸಾಹಿತ್ಯ ಹಾಗೂ ಬದುಕು. ಭಾಷೆ ಇರುವುದರಿಂದಲೇ ಜನಪದ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯವಾಗಿದೆ. ತಾಯಿ ಭಾಷೆಗೆ ಎಂದಿಗೂ ಅಗ್ರಸ್ಥಾನ ನೀಡಬೇಕು ಎಂದರು.

ಅನ್ಯ ಭಾಷೆಗಳು ಉಚ್ವಾಸದಂತೆ ಇದ್ದು ಕನ್ನಡ ನಿಶ್ವಾಸವಾಗಿರಬೇಕು. ಅಂತಹ ಬದ್ಧತೆ ನಮ್ಮಲ್ಲಿರಬೇಕು. ಮಾತನಾಡುವುದನ್ನೇ ಬರೆಯಲು ಹಾಗೂ ಬರೆಯುವುದನ್ನೇ ಮಾತನಾಡಲು ಸಾಧ್ಯವಿರುವ ಸುಂದರ ಭಾಷೆ ನಮ್ಮ ಕನ್ನಡ. ಹೊಸ ಪದಗಳ ಸೃಷ್ಟಿಯ ಮೂಲಕ ಕನ್ನಡ ಭಾಷೆಗೆ ಕೊಡುಗೆ ನೀಡಿ ಭಾಷಾ ಬೆಳವಣಿಗೆಯ ಕಡೆಗೂ ಗಮನ ನೀಡಬೇಕು. ವಿದ್ಯಾರ್ಥಿಗಳ ದೆಸೆಯಿಂದಲೇ ಈ ರೀತಿ ಕನ್ನಡಿಗರು ಯೋಚಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಜಿಲ್ಲಾಧಿಕಾರಿ ಮನೆ ಆವರಣದಲ್ಲಿನ ಶ್ರೀಗಂಧ ಮರ ಕಳ್ಳತನ

YV Gundurao

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ತಾಯಿ ನುಡಿಯಲ್ಲಿ ಉಸಿರಾಡಬೇಕು. ವಿಶ್ವ ಮಾತೃಭಾಷಾ ದಿನ ಎಂದು ಇವತ್ತಿನ ದಿನಕ್ಕೆ ಮಾತ್ರ ಕಾರ್ಯಕ್ರಮ ಸಿಮೀತಗೊಳಿಸುವುದು ಬೇಡ. 3 ತಿಂಗಳ ಕಾಲ ಶಾಲೆಗಳಲ್ಲಿ ಕನ್ನಡವನ್ನು ಪಸರಿಸುವ ಕೆಲಸ ಮಾಡಬೇಕು ಎಂದು ಕನ್ನಡ ಜಾಗೃತಿ ಸಮಿತಿ ಸದಸ್ಯರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *