ರಾಯಚೂರು: ವಿದ್ಯುತ್ ಅವಘಡದಿಂದಾಗಿ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿರುವ ಘಟನೆ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್)ನಲ್ಲಿ ನಡೆದಿದೆ.
ಸ್ವಿಚ್ ಗೇರ್ ನಲ್ಲಿ ಬೋರ್ಡ್ ಬದಲಿಸುವ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಕೆಎಎಸ್ಎಲ್ ಕಂಪನಿ ಗುತ್ತಿಗೆ ಕಾರ್ಮಿಕ ಮಹೇಶ್ ಗಾಯಗೊಂಡಿದ್ದಾರೆ. ಹೊಟ್ಟೆ, ತೊಡೆ, ಕಾಲಿನ ಭಾಗ ಭಾಗಶ: ಸುಟ್ಟಿದ್ದು, ಮಹೇಶ್ ಸ್ಥಿತಿ ಗಂಭೀರವಾಗಿದೆ.
ರಾಯಚೂರಿನ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಮಹೇಶ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಸೌಲಭ್ಯ ಹಾಗೂ ವೈದ್ಯರಿಲ್ಲದ ಕಾರಣ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ವೈಟಿಪಿಎಸ್ ಹಾಗೂ ಉಪ ಗುತ್ತಿಗೆ ಪಡೆದಿರುವ ಕೆಎಎಸ್ಎಲ್ ಕಂಪನಿ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳದಿರುವುದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕನಿಷ್ಠ ಮಟ್ಟದ ಸುರಕ್ಷತೆಯೂ ಇಲ್ಲದೆ ವಿದ್ಯುತ್ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಗಾಯಗಳಾಗಿವೆ.
ಘಟನೆಯಿಂದ ಭಯಭೀತರಾಗಿರುವ ವೈಟಿಪಿಎಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.