ಮಡಿಕೇರಿ: ಪಲ್ಟಿಯಾದ ಲಾರಿಯೊಳಗಿನಿಂದ ಕಾಂಕ್ರೀಟ್ ಮಿಕ್ಸರ್ ಬಿದ್ದ ಪರಿಣಾಮ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸಬೀಡು ಬಳಿ ನಡೆದಿದೆ.
ಕೂಡಿಗೆ ನಿವಾಸಿ ಮಹಾದೇವ್ (48) ಮೃತ ದುರ್ದೈವಿ ಕಾರ್ಮಿಕ. ಮಿನಿಲಾರಿಯಲ್ಲಿ ಗಾರೆ ಕೆಲಸಕ್ಕೆಂದು ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಕಾಂಕ್ರಿಟ್ ಕೆಲಸಕ್ಕೆಂದು ಹಲವು ಮಂದಿ ಕಾರ್ಮಿಕರನ್ನು ಮಿನಿ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಲಾರಿಯ ಬ್ರೇಕ್ ಫೇಲ್ ಆಗಿದೆ. ಪರಿಣಾಮ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದಿದೆ. ಈ ವೇಳೆ ಲಾರಿಯೊಳಗಿದ್ದ ಮಹಾದೇವು ಅವರ ಮೇಲೆ ಕಾಂಕ್ರಿಟ್ ಮಿಕ್ಸರ್ ಬಿದ್ದಿದೆ. ಪರಿಣಾಮ ಮಹದೇವ್ ಸ್ಥಳದಲ್ಲೇ ಮೃತಪಟ್ಟರೆ, ನಾಲ್ಕೈದು ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.
ಫಟನೆ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.