ಬೆಂಗಳೂರು: ಹಣಕ್ಕಾಗಿ ಕೆಲಸಗಾರ ವೃದ್ಧ ಮಾಲೀಕನನ್ನು ಭೀಕರವಾಗಿ ಹತ್ಯೆಗೈದ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.
ಚಾಮರಾಜಪೇಟೆಯ 4ನೇ ಕ್ರಾಸ್ನಲ್ಲಿರುವ ಕಿಂಗ್ಸ್ ಎನ್ಕ್ಲೇವ್ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದ್ದು, ಜುಗ್ಗರಾಜ್ ಜೈನ್(77) ಕೊಲೆಯಾದ ವ್ಯಕ್ತಿ. ಕೆಲಸಗಾರ ಬಿಜೋರಾಮ್ ಆರೋಪಿಯಾಗಿದ್ದಾನೆ.
ಚಾಮರಾಜಪೇಟೆಯಲ್ಲಿ ದೀಪಂ ಎಲೆಕ್ಟ್ರಿಕಲ್ಸ್ನ ಮಾಲೀಕರಾಗಿದ್ದ ಜುಗ್ಗರಾಜ್ಗೆ ಇಬ್ಬರು ಮಕ್ಕಳಿದ್ದಾರೆ. ಮೂಲತಃ ರಾಜಸ್ಥಾನದವರಾಗಿದ್ದ ಜುಗ್ಗರಾಜ್, ಕಳೆದ 4 ವರ್ಷಗಳಿಂದ ಚಾಮರಾಜಪೇಟೆಯ ಅಪಾರ್ಟ್ಮೆಂಟ್ನಲ್ಲಿ ಒಬ್ಬ ಮಗ ಹಾಗೂ ಸೊಸೆಯೊಂದಿಗೆ ವಾಸವಿದ್ದರು.
ಜುಗ್ಗರಾಜ್ ಮಗ ಕೆಲಸದ ನಿಮಿತ್ತ ಗೋವಾಗೆ ತೆರಳಿದ್ದರು. ಸೊಸೆ ತನ್ನ ತಾಯಿ ಮನೆಗೆ ಹೋಗಿದ್ದರು. ಮನೆಯಲ್ಲಿ ಜುಗ್ಗರಾಜ್ ಮಾತ್ರವೇ ಇದ್ದ ಸಂದರ್ಭ ಅಂಗಡಿ ಕೆಲಸಗಾರ ಬಿಜೋರಾಮ್ ಮಾಲೀಕನ ಹತ್ಯೆಗೈದಿದ್ದಾನೆ. ಇದನ್ನೂ ಓದಿ: ರಾಯಚೂರಿನ ಪೊಲೀಸ್ ಠಾಣೆಗೆ ದೇಶದಲ್ಲೇ 5ನೇ ಸ್ಥಾನ
ಕಳೆದ ಎಂಟು ತಿಂಗಳಿನಿಂದ ಕೆಲಸಕ್ಕೆ ಇದ್ದ ಬಿಜೋರಾಮ್ ಮಂಗಳವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ವೃದ್ಧನ ಕೈ, ಕಾಲು ಕಟ್ಟಿ ಹಾಕಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾನೆ. ಇದನ್ನೂ ಓದಿ: ಮೈಕ್ ವಾರ್ ಗಡುವು ಇಂದು ಅಂತ್ಯ- ಅವಧಿ ವಿಸ್ತರಣೆಗೆ ಮುಸ್ಲಿಂ ಮುಖಂಡರ ಆಗ್ರಹ
ಮುಂಜಾನೆ ಜುಗ್ಗರಾಜ್ ಮೊಮ್ಮಗ ಅಪಾರ್ಟ್ಮೆಂಟ್ಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಚಾಮರಾಜಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಘಟನೆ ಬಗ್ಗೆ ಸದ್ಯ ತನಿಖೆ ನಡೆಯುತ್ತಿದ್ದು, ಆರೋಪಿಯನ್ನು ಹಿಡಿಯಲು ವಿಶೇಷ ತಂಡದ ರಚನೆ ಮಾಡಲಾಗಿದೆ ಎಂದು ಡಿಸಿಪಿ ಸಂಜೀವ್ ಪಾಟೀಲ್ ಹೇಳಿದ್ದಾರೆ.