ಲಕ್ನೋ: ಮೈತ್ರಿಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ನೀಡಿ ಎಂದು ಕಾಂಗ್ರೆಸ್ ಜೊತೆ ನಾನು ಭಿಕ್ಷೆ ಬೇಡಲ್ಲ ಎಂದು ಬಹುಜನ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ಬಿಎಸ್ಪಿ ಮೈತ್ರಿಯಲ್ಲಿ ನಮ್ಮ ಪಕ್ಷಕ್ಕೆ ಸಿಗಬೇಕಾದ ಸ್ಥಾನಗಳ ಬಗ್ಗ ಮಾತ್ರ ಬೇಡಿಕೆ ಇಟ್ಟಿದ್ದೆ. ಆದರೆ ಅದನ್ನು ತಪ್ಪಾಗಿ ತಿಳಿದಿದ್ದು ಸರಿಯಲ್ಲ. ಇದರಿಂದಾಗಿ ಮೈತ್ರಿಗೆ ಕಾಯದೇ ನಾವು ಸ್ವತಂತ್ರವಾಗಿ ರಾಜಸ್ಥಾನ ಹಾಗೂ ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಎಸ್ಪಿಯನ್ನು ನಿಶ್ಯಕ್ತಿಗೊಳಿಸಲು ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪ್ರಯತ್ನಿಸುತ್ತಿವೆ. ಕಾಂಗ್ರೆಸ್ಗೆ ಸೊಕ್ಕು ಹೆಚ್ಚಾಗುತ್ತಿದೆ ಎಂದು ವ್ಯಂಗ್ಯವಾಡಿದ ಮಾಯಾವತಿ ಅವರು, ಮಧ್ಯಪ್ರದೇಶ ಹಾಗೂ ರಾಜಸ್ಥಾನ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೊಗೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ ಕಾಂಗ್ರೆಸ್ಸಿನ ತಪ್ಪುಗಳು ಹಾಗೂ ಭ್ರಷ್ಟಾಚಾರವನ್ನು ಜನರು ಮರೆತಿಲ್ಲ. ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂದು ಆರೋಪಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೊನಿಯಾ ಗಾಂಧಿ ಅವರ ಬಗ್ಗೆ ಮೃದು ಧೋರಣೆ ತೋರಿದ ಮಾಯಾವತಿ ಅವರು, ಕಾಂಗ್ರೆಸ್ನ ಈ ಇಬ್ಬರು ನಾಯಕರು ಮೈತ್ರಿಗೆ ಮುಂದಾಗಿದ್ದರು. ಆದರೆ ದಿಗ್ವಿಜಯ ಸಿಂಗ್ ಅವರ ಕೆಲವು ನಾಯಕರು ಕಾಂಗ್ರೆಸ್ ಹಾಗೂ ಬಿಎಸ್ಪಿ ಮೈತ್ರಿಗೆ ಭಾರೀ ವಿರೋಧ ವ್ಯಕ್ತಪಡಿಸಿದರು. ಏಕೆಂದರೆ ಅವರಿಗೆ ಇಡಿ ಹಾಗೂ ಸಿಬಿಐ ದಾಳಿಯ ಆತಂಕ ಮನೆ ಮಾಡಿದೆ ಎಂದು ಕಾಲೆಳೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv