ಬೆಂಗಳೂರು: ಇಂದಿನಿಂದ ರಿಯಾಯಿತಿ ದರದಲ್ಲಿ ಮೈಸೂರು ರೇಷ್ಮೆ ಸೀರೆ ನೀಡುವುದಾಗಿ ಘೋಷಿಸಿ, ದಿನಾಂಕ ಮುಂದೂಡಿದ್ದರಿಂದ ಸಮ್ಮಿಶ್ರ ಸರ್ಕಾರ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂ.ಜಿ ರೋಡ್ ಸಮೀಪದ ಕರ್ನಾಟಕ ಸಿಲ್ಕ್ ಉತ್ಪಾದನಾ ಕೇಂದ್ರದಲ್ಲಿ ವರಲಕ್ಷ್ಮೀ ಹಬ್ಬದ ನಿಮಿತ್ತ ಸಮ್ಮಿಶ್ರ ಸರ್ಕಾರವು, ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ನೀಡುವುದಾಗಿ ಘೋಷಿಸಿತ್ತು. ಅಷ್ಟೇ ಅಲ್ಲದೇ ಆಗಸ್ಟ್ 15ರಿಂದ ಸೀರೆಗಳ ಮಾರಾಟ ಪ್ರಾರಂಭವಾಗಲಿದೆ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿತ್ತು.
ಇಂದು ಬೆಳಗ್ಗೆ ಕರ್ನಾಟಕ ಸಿಲ್ಕ್ ಉತ್ಪಾದನಾ ಕೇಂದ್ರಕ್ಕೆ ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಪ್ರತಿಯೊಬ್ಬರು ರಿಯಾಯಿತಿ ದರದ ಸೀರೆ ಪಡೆಯಲು ಕೈಯಲ್ಲಿ ಆಧಾರ ಕಾರ್ಡ್ ಹಿಡಿದುಕೊಂಡು ತಂದಿದ್ದರು. ಆದರೆ ದಿನಾಂಕ ಮುಂದೂಡಲಾಗಿದೆ ಅಂತಾ ಕೇಂದ್ರದ ಮುಂದೆ ಬೋರ್ಡ್ ಹಾಕಿದ್ದನ್ನು ನೋಡಿ ಮಹಿಳೆಯರು ಅಸಮಾಧಾನ ಹೊರ ಹಾಕಿದ್ದಾರೆ.
ಕರ್ನಾಟಕ ಸಿಲ್ಕ್ ಉತ್ಪಾದನಾ ಕೇಂದ್ರಕ್ಕೆ ಮಾಧ್ಯಮಗಳು ಬರುತ್ತಿದ್ದಂತೆ ವರಸೆ ಬದಲಿಸಿದ ಕೆಎಸ್ಐಸಿ ಮ್ಯಾನೇಜರ್ ಭಾನು ಪ್ರಕಾಶ್, ಚುನಾವಣಾ ನೀತಿ ಸಂಹಿತಿ ಜಾರಿಯಾಗಿದ್ದರಿಂದ ರಿಯಾಯಿತಿ ದರ ಸೀರೆ ಮಾರಾಟವನ್ನು ಮುಂದೂಡಲಾಗಿದೆ. ನಿನ್ನೆ ರಾತ್ರಿಯಷ್ಟೇ ನಮಗೆ ಮಾಹಿತಿ ಗೊತ್ತಾಗಿದ್ದು, ಇವತ್ತು ಬಂದಿರುವ ಮಹಿಳೆಯರ ಆಧಾರ್ ಕಾರ್ಡ್ ನೋಡಿ ಟೋಕನ್ ನೀಡಲಾಗುತ್ತದೆ. ಮುಂದಿನ ದಿನ ಸೀರೆ ವಿತರಣೆ ಮಾಡುವಾಗ ಈ ಮಹಿಳೆಯರಿಗೆ ನೀಡಲಾಗುವುದು ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv