– ಕೆಲಸ ಮಾಡಿ ಯಾರು ಬೈಗುಳ ತಿಂತಾರೆ ಅಂತ ಗೋಳು
ರಾಯಚೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ (Congress Guarantee) ಯೋಜನೆಗಳಿಗೆ ಆಧಾರ್ (Aadhar) ಕಾರ್ಡ್ ಕಡ್ಡಾಯ ಹಿನ್ನಲೆ ರಾಯಚೂರಿನ (Raichuru) ಆಧಾರ್ ಕೇಂದ್ರದಲ್ಲಿ ಹೆಚ್ಚಿದ ತೀವ್ರ ಒತ್ತಡದಿಂದಾಗಿ ಮಹಿಳಾ ಸಿಬ್ಬಂದಿ ಸಾರ್ವಜನಿಕರ ಎದುರೇ ಕಣ್ಣೀರಿಟ್ಟ ಘಟನೆ ನಡೆದಿದೆ.
ರಾಯಚೂರು ನಗರದ ಅಂಚೆ ಕಚೇರಿಯಲ್ಲಿ ತೆರೆಯಲಾಗಿದ್ದ ಆಧಾರ್ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಹೆಚ್ಚಿದ ವರ್ಕ್ಲೋಡ್ನಿಂದಾಗಿ ಮಹಿಳಾ ಸಿಬ್ಬಂದಿ ಕಣ್ಣೀರಿಟ್ಟ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ತಡೆ ಹಿಡಿದ ಬಿಲ್ಗಳ ಬಿಡುಗಡೆ ಮಾಡಿ – ಸಿಎಂಗೆ ಕೆಂಪಣ್ಣ ಮನವಿ
ಆಧಾರ್ ಕೇಂದ್ರದಲ್ಲಿ ಆಧಾರ್ ಲಿಂಕ್ ಸೇರಿದಂತೆ ತಿದ್ದುಪಡಿಗೆ ನಿತ್ಯ ಜನಸಂದಣಿ ಹೆಚ್ಚಾಗಿದೆ. ಆದರೆ ಕೇಂದ್ರದಲ್ಲಿ ಓರ್ವ ಮಹಿಳಾ ಸಿಬ್ಬಂದಿಯನ್ನ ಮಾತ್ರ ಕರ್ತವ್ಯಕ್ಕೆ ನಿಯೋಜಿಸಿದ್ದು ಒತ್ತಡ ಹೆಚ್ಚಾಗಿದೆ. ಸಾರ್ವಜನಿಕರು ಸೇರಿದಂತೆ ಮೇಲಧಿಕಾರಿಯಿಂದಲೂ ಒತ್ತಡ ಹೆಚ್ಚಾಗಿರುವ ಹಿನ್ನಲೆ ಕಣ್ಣೀರು ಹಾಕುತ್ತಲೇ ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ನನಗೆ ಆಗಲ್ಲ ಇದು. ಕೆಲಸ ಮಾಡಿ ಯಾರು ಬೈಗುಳ ತಿಂತಾರೆ. ನಾನು ಒಬ್ಬಾಕೆ ಎಷ್ಟು ಅಂತಾ ಕೆಲಸ ಮಾಡಲಿ. ನಾನು ಒಳಗೆ ಹೋಗಿ ಆಗಲ್ಲ ಅಂತ ಸರ್ಗೆ ಹೇಳ್ತೀನಿ ಎಂದು ಕಣ್ಣೀರು ಹಾಕಿದ್ದಾರೆ. ಸಾರ್ವಜನಿಕರ ಮುಂದೆಯೇ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಗೃಹಲಕ್ಷ್ಮಿಯನ್ನ ನಾನೇ ಹೋಲ್ಡ್ ಮಾಡಿಸಿದ್ದೇನೆ – ಡಿಸಿಎಂ ಡಿಕೆಶಿ