ಮಂಗಳೂರು: ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆಗೈದು, ಆಕೆಯ ದೇಹದಿಂದ ರುಂಡ ಬೇರ್ಪಡಿಸಿ ಗೋಣಿಚೀಲದಲ್ಲಿ ತುಂಬಿ ಸಾರ್ವಜನಿಕ ಸ್ಥಳದಲ್ಲಿ ಅದನ್ನು ಎಸೆದಿರುವ ಭಯಾನಕ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕದ್ರಿ ಪಾರ್ಕ್ ಬಳಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ರಸ್ತಸಿಕ್ತವಾಗಿದ್ದ ಗೋಣಿಚೀಲವೊಂದನ್ನು ಎಸೆದು ಹೋಗಿದ್ದಾರೆ. ಕೊಲೆಯಾದ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಗೋಣಿ ಚೀಲದಲ್ಲಿ ಶವ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಗೋಣಿಚೀಲದಲ್ಲಿ ಹೆಲ್ಮೆಟ್ ಸಮೇತ ಅನಾಮಧೇಯ ಮಹಿಳೆಯ ರುಂಡ ಪತ್ತೆಯಾಗಿದೆ.
ಈ ಘಟನೆಯಾದ ಸುಮಾರು ಒಂದು ಘಂಟೆ ಬಳಿಕ ಮಂಗಳಾದೇವಿ ಪ್ರದೇಶದ ಬಳಿಯಿರುವ ಮಾರ್ನಮಿಕಟ್ಟದಲ್ಲಿ ತಲೆ ಇಲ್ಲದ ಸ್ಥಿತಿಯಲ್ಲಿ ಮಹಿಳೆಯ ದೇಹ ಪತ್ತೆಯಾಗಿದೆ. ಈ ಭಯಾನಕ ದೃಶ್ಯವನ್ನು ಕಂಡು ಪತ್ತೆಯಾಗಿರುವ ದೇಹ ಹಾಗೂ ತಲೆ ಒಂದೇ ಮಹಿಳೆಯದ್ದು ಎಂದು ಪೊಲೀಸರು ಶಂಕಿಸಿದ್ದಾರೆ.
ಸದ್ಯ ಈ ಸಂಬಂಧ ಕದ್ರಿ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.