ಚಿಕ್ಕಮಗಳೂರು: ಕೌಟುಂಬಿಕ ಸಮಸ್ಯೆಗೆ ಆನ್ಲೈನ್ ಜ್ಯೋತಿಯಿಂದ (Online Astrologer) ಪರಿಹಾರ ಹುಡುಕಲು ಹೊರಟ ಮಹಿಳೆಯೊಬ್ಬರು ಎರಡೇ ತಿಂಗಳಲ್ಲಿ ಒಂದು ಲಕ್ಷದ ಹತ್ತು ಸಾವಿರ ರೂಪಾಯಿಯನ್ನು ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ (Chikkamagaluru) ನಡೆದಿದೆ.
ಕೌಟುಂಬಿಕ ಕಲಹದಿಂದ ಮಾನಸಿಕ ನೆಮ್ಮದಿಯಿಂದ ಇಲ್ಲ ಅಂತ ಫೇಸ್ಬುಕ್ನಲ್ಲಿ (Facebook) ಬಂದಿದ್ದ ಪಂಡಿತ್ ಮೋದಿ ಬೆಟ್ಟಪ್ಪ ಅಸ್ಟ್ರಾಲಜಿಯ ಜಾಹೀರಾತು ನೋಡಿ ಅದರಲ್ಲಿ ಬರುತ್ತಿದ್ದ ನಂಬರ್ಗೆ ಕರೆ ಮಾಡಿದ್ದಾರೆ. 25 ವರ್ಷದ ಯುವಕ ಪಂಡಿತ್ ಮೋದಿ ಬೆಟ್ಟಪ್ಪ ಎಂಬ ಜ್ಯೋತಿಷಿ, ಮಹಿಳೆಗೆ ನಿಮ್ಮ ಸಮಸ್ಯೆಗೆ ಪೂಜೆ ಮಾಡಬೇಕೆಂದು 3 ಸಾವಿರ ಹಣ ಕೇಳಿದ್ದಾನೆ. ಆಗ ಮಹಿಳೆ ಗೂಗಲ್ ಪೇ ಮೂಲಕ 3 ಸಾವಿರ ಹಣ ಹಾಕಿದ್ದಾರೆ. ತದನಂತರ ಎರಡರಿಂದ ಮೂರು ತಿಂಗಳ ಅವಧಿಯಲ್ಲಿ ಆತ ಕೇಳಿದಾಗೆಲ್ಲ 4, 7, 13, 17, 20 ಸಾವಿರ ಹಣ ಹಾಕಿದ್ದಾರೆ. ಕೌಟುಂಬಿಕ ಕಲಹದಿಂದ ನೊಂದಿದ್ದ ಆ ಮಹಿಳೆ ಸಮಸ್ಯೆ ಬಗೆಹರಿಯುತ್ತದೆ ಎಂದು ಕೇಳಿದಾಗೆಲ್ಲಾ ಹಣ ಹಾಕಿ ಕೈ ಸುಟ್ಟುಕೊಂಡಿದ್ದಾರೆ. ಆ ನಕಲಿ ಜ್ಯೋತಿಷಿ ಕೂಡ ಕೇಳಿದಾಗೆಲೆಲ್ಲಾ ಹಣ ಹಾಕುತ್ತಾರೆಂದು ಬೇಕಾದಾಗೆಲ್ಲ ಹಣ ಹಾಕಿಸಿಕೊಂಡಿದ್ದಾನೆ. ಕೊನೆಗೆ ನಾನೇ ಮತ್ತೊಂದು ಜಾಗಕ್ಕೆ ಹೋಗಿ ಶಾಂತಿ ಹೋಮ ಮಾಡಬೇಕೆಂದು ಮತ್ತೆ ಹಣ ಕೇಳಿದ್ದಾನೆ. ಆಗ ಅನುಮಾನಗೊಂಡ ಮಹಿಳೆ ಗ್ರಾಮಾಂತರ ಠಾಣೆಗೆ ಬಂದು ದೂರು ನೀಡಿದ್ದಾಳೆ.
ಬಳಿಕ ಆನ್ಲೈನ್ ಕೇಸ್ ಆದ ಕಾರಣ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿ, ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿದ್ದ ಗಣೇಶ್ ಗೊಂದಾಲ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಯುವಕನ ತಂದೆ ಕೂಡ ಜ್ಯೋತಿಷಿ ಎನ್ನಲಾಗುತ್ತಿದ್ದು, ಕೊಳ್ಳೇಗಾಲಕ್ಕೆ ಹೋಗಿ ಜ್ಯೋತಿಷಿ ಕಲಿತೆ ಎಂದು ಆರೋಪಿ ಹೇಳುತ್ತಿದ್ದಾನೆ. ಇದನ್ನೂ ಓದಿ: ನಮ್ಮ ದೇಶದಲ್ಲಿ ಯಾವುದರಿಂದ್ಲೂ ಧರ್ಮವನ್ನು ಹೊರಗೆ ತೆಗೆಯೋಕೆ ಆಗಲ್ಲ: ಬಿ.ಎಲ್ ಸಂತೋಷ್
ಈತ ಮೋಸ ಮಾಡಿರುವುದು ಚಿಕ್ಕಮಗಳೂರು ಮಹಿಳೆಗಾದರೂ ಕೂಡ ಆತ ಮೂಲತಃ ಬೆಂಗಳೂರಿನವನು. ಹಾಗಾಗಿ, ಬೆಂಗಳೂರಿನ ಜನ ಕೂಡ ಇವನು ಹಾಗೂ ಇಂತಹ ನಕಲಿ ಜ್ಯೋತಿಷಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕೌಟುಂಬಿಕ ಸಮಸ್ಯೆ ಬಗೆಹರಿದು ಮಾನಸಿಕ ನೆಮ್ಮದಿ ಸಿಕ್ಕರೆ ಸಾಕೆಂದು ಕೇಳಿದಾಗೆಲ್ಲಾ ಸಾಲ-ಸೋಲ ಮಾಡಿ ಹಣ ಹಾಕಿದ ಆ ಮಹಿಳೆ ಇಂದು ಕಣ್ಣೀರು ಸುರಿಸುತ್ತಿದ್ದಾರೆ. ಮೋಸ ಮಾಡುವವರು ದಡ್ಡರಲ್ಲ. ಹೋಗುವವರೇ ದಡ್ಡರು. ಯಾರ ಸಮಸ್ಯೆಯನ್ನೂ ಯಾರೂ ಪರಿಹರಿಸಲ್ಲ. ನಮ್ಮ ಸಮಸ್ಯೆಗೆ ನಾವೇ ಕಾರಣಕರ್ತರು. ಪರಿಹರಿಸಿಕೊಳ್ಳಬೇಕಾದವರು ನಾವೇ. ಜನ ನಮ್ಮ ಸಮಸ್ಯೆಗೆ ಯಾರೋ ಪರಿಹಾರ ನೀಡುತ್ತಾರೆ ಎಂದು ಹಣ-ಸಮಯ ಕಳೆದುಕೊಳ್ಳುವ ಬದಲು ತಾವೇ ಕೂತು ಮಾತುಕತೆ ನಡೆಸಿದರೆ ಯಾವ ಸಮಸ್ಯೆಯೂ ಇಂತಹ ಜ್ಯೋತಿಷಿಗಳ ಮನೆ ಕದ ಬಡಿಯಲ್ಲ. ಇದನ್ನೂ ಓದಿ: ಓಲಾ, ಉಬರ್, ರ್ಯಾಪಿಡೋ ಸುಲಿಗೆ- ಪ್ರಯಾಣಿಕರಿಗೂ ಬ್ಲೇಡ್, ಚಾಲಕರಿಗೂ ಕತ್ತರಿ