ಹಾಸನ: ಅನಾರೋಗ್ಯ ಪೀಡಿತ ಮಹಿಳೆಯನ್ನು ಗುಣಪಡಿಸುವ ನೆಪದಲ್ಲಿ ಪೂಜೆ ವೇಳೆ ಪೂಜಾರಿ ಬೆತ್ತದ ಏಟು ನೀಡಿದ ಪರಿಣಾಮವಾಗಿ, ಮಹಿಳೆ ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಪಾರ್ವತಿ (47) ಮೃತಪಟ್ಟ ಮಹಿಳೆ. ಕಳೆದ ಕೆಲದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಹೀಗಾಗಿ ದೇವರ ಮೊರೆ ಹೋಗಿದ್ದರು. ನೀವು ಗುಣಮುಖರಾಗಲು ಪೂಜೆ ಮಾಡಿಸಬೇಕು ಎಂದು ಮಹಿಳೆಗೆ ಪೂಜಾರಿ ತಿಳಿಸಿದ್ದಾರೆ. ಪೂಜೆ ಮಾಡಿ ತಲೆನೋವು ಗುಣಪಡಿಸುವುದಾಗಿ ಹೇಳಿ ಮಹಿಳೆ ತಲೆಗೆ ಪೂಜಾರಿ ಬೆತ್ತದಿಂದ ಹೊಡೆದಿದ್ದಾರೆ. ಇದನ್ನೂ ಓದಿ: ಮದುವೆಯಾದ 6 ತಿಂಗಳಿನಲ್ಲೇ ಪತ್ನಿಯ ಕತ್ತು ಹಿಸುಕಿ ಕೊಲೆ
ಹಿರಿಯಾಪಟ್ಟಣದಮ್ಮ ದೇವರ ಪೂಜಾರಿಯು ಬೆತ್ತದಿಂದ ತಲೆಗೆ ಹೊಡೆದ ಪರಿಣಾಮ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಆಕೆ ಚಿಕಿತ್ಸೆ ಫಲಕಾರಿಯಾಗದೇ ಹಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆ ನಂತರ ಪೂಜಾರಿ ನಾಪತ್ತೆಯಾಗಿದ್ದಾನೆ. ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್ನ ಪ್ರಮುಖ ಆರೋಪಿ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್