ಹುಬ್ಬಳ್ಳಿ: ನಕಲಿ ದಾಖಲೆ ಸೃಷ್ಟಿಸಿ ಮಹಿಳೆಯರ ಹೆಸರಿನಲ್ಲಿದ್ದ 17 ಎಕ್ರೆ 19 ಗುಂಟೆ ಜಮೀನನ್ನು ಬೇರೆ ಅವರ ಹೆಸರಿಗೆ ವರ್ಗಾಯಿಸಿ, ಕೋಟ್ಯಂತರ ರೂಪಾಯಿ ಸಾಲ ಮಾಡಿ ವಂಚಿಸಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ವಾಸವಾಗಿರುವ ಶೋಭಾ, ಅನ್ನಪೂರ್ಣ, ಜಯಶ್ರೀ ಎಂಬವರ ಹೆಸರಿನಲ್ಲಿದ್ದ ಜಮೀನನ್ನ ನಕಲಿ ದಾಖಲೆ ಸೃಷ್ಟಿಸಿ ಭೂ ವರ್ಗಾವಣೆ ಮಾಡಿ ವಂಚನೆ ಮಾಡಲಾಗಿದೆ ಎಂದು ಮಹಿಳೆಯರು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೇಶ್ವಾಪುರದ ಬಸವರಾಜ ಕಮತಗಿ, ಆನಂದ ಕಮತಗಿ, ಸುಲೋಚನಾ ಕಮತಗಿ, ವಿಶ್ವನಾಥ ಕಮತಗಿ, ಗಿರಿಜಾ ಪಾವಟೆ ಅವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳು ಹುಬ್ಬಳ್ಳಿ ಉಪ ನೋಂದಣಿ ಕಚೇರಿಯಲ್ಲಿ ಖರೀದಿ ಕಾಗದ ಪತ್ರ ಮಾಡಿಕೊಂಡು ತಮ್ಮ ಹೆಸರಿಗೆ ಜಮೀನನ್ನು ದಾಖಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಕಲಿ ದಾಖಲೆ ಹಾಗೂ ಸಹಿ ಮಾಡಿ ಶೋಭಾ, ಅನ್ನಪೂರ್ಣ, ಜಯಶ್ರೀ ಹೆಸರಿನಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕೇಶ್ವಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಇದೀಗ ನಕಲಿ ದಾಖಲೆ ಹಾಗೂ ಬ್ಯಾಂಕ್ ಸಾಲದ ವಿವರದ ಮೇಲೆ ತನಿಖೆ ಆರಂಭಿಸಿದ್ದಾರೆ.