ಹಾಸನ: ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
22 ವರ್ಷದ ಅಮೃತಾ ಮೃತ ದುರ್ದೈವಿ. ಮಂಡ್ಯ ಮೂಲದ ಅಮೃತಾರನ್ನ 6 ವರ್ಷಗಳ ಹಿಂದೆ ಚನ್ನರಾಯಪಟ್ಟಣದ ಪ್ರವೀಣ್ ಎಂಬಾತನ ಜೊತೆ ಮದುವೆ ಮಾಡಿಕೊಡಲಾಗಿತ್ತು. ಪ್ರವೀಣ್ ಮತ್ತು ಆತನ ಮನೆಯವರು ಮೊದಲಿಂದಲೂ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದರು ಎಂದು ಅಮೃತಾ ಪೋಷಕರು ಮತ್ತು ಸಂಬಂಧಿಕರು ಆರೋಪಿಸುತ್ತಿದ್ದಾರೆ.
ಮನೆಯಿಂದ 5 ಲಕ್ಷ ರೂಪಾಯಿ ತರುವಂತೆ ಕಳೆದ ಕೆಲ ತಿಂಗಳಿನಿಂದ ಅಮೃತಾಗೆ ಬೆದರಿಕೆ ಹಾಕಿದ್ದರು. ಇದು ಆತ್ಮಹತ್ಯೆಯಲ್ಲ, ಬದಲಾಗಿ ವ್ಯವಸ್ಥಿತ ಕೊಲೆ. ಅಮೃತಾಳನ್ನ ಕೊಲೆ ಮಾಡಿ ನೇಣು ಬಿಗಿದಿದ್ದಾರೆ. ಮಂಡಿಯೂರಿ ನೇಣು ಹಾಕಿಕೊಂಡಿರುವುದನ್ನ ನೋಡಿದರೆ ಮೇಲ್ನೋಟಕ್ಕೆ ಇದೊಂದು ಕೊಲೆಯೆಂದೇ ಭಾಸವಾಗುತ್ತಿದ್ದು, ಅಮೃತಾ ಪತಿ ಪ್ರವೀಣ್ ಹಾಗೂ ಆತನ ಮನೆಯವರನ್ನ ಬಂಧಿಸಿ ನ್ಯಾಯ ಕೊಡಿಸಿ ಎಂದು ಮಾಧ್ಯಮದ ಎದುರು ಅಮೃತಾ ತಾಯಿ ಲಕ್ಷ್ಮಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಘಟನೆ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಮೃತ ಅಮೃತಾ ಪತಿ ಪ್ರವೀಣ್, ಅತ್ತೆ ಕಮಲಬಾಯಿ, ಸುನೀತಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಅಮೃತಾ ಶವವನ್ನ ಚನ್ನರಾಯಪಟ್ಟಣದ ಶವಗಾರದಲ್ಲಿ ಇಡಲಾಗಿದೆ. ಅಮೃತಾ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.