ಕೋಲಾರ: ಕುಡುಕ ಗಂಡ ಹಾಗೂ ಸಂಬಂಧಿಕರ ಕಿರುಕುಳ ತಾಳಲಾರದೇ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಮುಂದಾದ ಘಟನೆ ಕೋಲಾರದಲ್ಲಿ ನಡೆದಿದೆ. ಸ್ಥಳೀಯರು ಮಹಿಳೆಯ ರಕ್ಷಣೆ ಮಾಡಿದ್ದಾರೆ.
ಆಂಧ್ರಪ್ರದೇಶ ಮೂಲದ ಕವಿತಾ(21) 4 ವರ್ಷಗಳ ಹಿಂದೆ ಕೋಲಾರದ ಕುಂಬಾರಹಳ್ಳಿ ಮೂಲದ ವಿನೋದ್ ಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಚಾಲಕ ವೃತ್ತಿ ಮಾಡುತ್ತಿದ್ದ ಪತಿಯೊಂದಿಗೆ ಆರಂಭದಲ್ಲಿ ಕವಿತಾ ಅನ್ಯೋನ್ಯವಾಗಿದ್ದರು. ಮದುವೆಯಾದ 3 ತಿಂಗಳ ಬಳಿಕ ವಿನೋದ್ ಪತ್ನಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ.
3 ವರ್ಷದ ಹಾಗೂ 9 ತಿಂಗಳ ಮಕ್ಕಳಿರುವ ಕವಿತಾಗೆ ಪತಿ ಪ್ರತೀ ದಿನ ಕಂಠ ಪೂರ್ತಿ ಕುಡಿದು ಚಿತ್ರ ಹಿಂಸೆ ಕೊಡುತ್ತಿದ್ದ. ಇದರಿಂದ ಮನನೊಂದ ಕವಿತಾ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಕಾಳಿ ನದಿಯಲ್ಲಿ ಕೈ ತೊಳೆಯಲು ಹೊದ ಯುವಕನನ್ನು ಎಳೆದೊಯ್ದ ಮೊಸಳೆ
ಕವಿತಾ ಮಕ್ಕಳೊಂದಿಗೆ ಕೋಲಾರದ ಅಂತರಗಂಗೆ ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದರು. ಆಕೆಯನ್ನು ಕಂಡು ಅನುಮಾನಗೊಂಡ ಸ್ಥಳೀಯರು ವಿಚಾರಣೆ ಮಾಡಿ ರಕ್ಷಿಸಿದ್ದಾರೆ. ಬಳಿಕ ಅಂತರಗಂಗೆ ಬುದ್ಧಿಮಾಂದ್ಯ ಶಾಲೆಯಲ್ಲಿರಿಸಿ ಆಶ್ರಯ ನೀಡಿದ್ದಾರೆ.
ಬಳಿಕ ಮನೆ ಬಿಟ್ಟು ಬಂದಿದ್ದ ಕವಿತಾ ಪತಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಲು ಮುಂದಾಗಿದ್ದ ಬಗ್ಗೆ ತಿಳಿಸಿದ್ದಳು. ಆದರೆ ವಿನೋದ್ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದಾಗ ಕವಿತಾ ಮತ್ತಷ್ಟು ನೊಂದು ಮತ್ತೆ ಆತ್ಮಹತ್ಯೆಗೆ ಅಂತರಗಂಗೆ ಬೆಟ್ಟದ ಕಡೆಗೆ ಮಕ್ಕಳೊಂದಿಗೆ ಹೋಗಿದ್ದಾರೆ. ಇದನ್ನು ಕಂಡ ಕೃಷ್ಣ ಎಂಬ ಸ್ಥಳೀಯ ಆಕೆಯನ್ನು ವಿಚಾರಿಸಿ ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ- ಒತ್ತಾಯ ಮಾಡಿ ಆ್ಯಸಿಡ್ ಕುಡಿಸಿದ ಪತಿ, ಕುಟುಂಬಸ್ಥರು
ದಿಕ್ಕು ದೆಸೆ ಇಲ್ಲದೆ ಅನಾಥ ಸ್ಥಿತಿಯಲ್ಲಿರುವ ಕವಿತಾ ಅಂತರಗಂಗೆ ಬುದ್ಧಿಮಾಂದ್ಯ ಶಾಲೆಯಲ್ಲಿ ಆಶ್ರಯ ಪಡೆದಿದ್ದು, ಪೊಲೀಸರ ಮೊರೆ ಹೋಗಿದ್ದಾರೆ.