ಬೆಂಗಳೂರು: ರಾಜಧಾನಿ ರಸ್ತೆ ಗುಂಡಿಗಳು ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗುತ್ತಿವೆ. ಪಾಲಿಕೆಯ ಕಳಪೆ ಕಾಮಗಾರಿಯಿಂದ ಬೆಂಗಳೂರಿನ ರಸ್ತೆಗಳಲ್ಲಿ ಹಳ್ಳದ ರೂಪದಲ್ಲಿ ಗುಂಡಿಗಳು ಬಾಯಿ ತೆರೆದುಕೊಂಡಿವೆ. ಸರಣಿ ಅಪಘಾತಗಳು ಆಗ್ತಿದ್ರೂ ಪಾಲಿಕೆ ಎಚ್ಚೆತ್ತುಕೊಳ್ಳುವಂತೆ ಕಾಣ್ತಿಲ್ಲ. ಇಂದೂ ಕೂಡ ರಸ್ತೆಗುಂಡಿ (Potholes) ತಪ್ಪಿಸಲು ಹೋಗಿ ಅಪಘಾತಕ್ಕೀಡಾದ ಮಹಿಳೆ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಹೌದು, ತಾಯಿ-ಮಗಳು (Mother-Daughter) ಶ್ರೀನಗರದಿಂದ ಗಾಯತ್ರಿ ನಗರದ ಮನೆಗೆ ಗಾಡಿಯಲ್ಲಿ ಬರುತ್ತಿದ್ದರು. ರಾಜಾಜಿನಗರದ ಸುಜಾತ ಟಾಕೀಸ್ ಬಳಿ ಸಾಲು ಸಾಲು ಗುಂಡಿಗಳನ್ನ ತಪ್ಪಿಸಲು ಪಯತ್ನಿಸಿ ಬ್ಯಾಲೆನ್ಸ್ ಸಿಗದೇ ಕೆಳಗಡೆ ಬಿದ್ದಿದ್ದಾರೆ. ಈ ವೇಳೆ ಬೆಂಗಳೂರಿನಿಂದ ಶಿವಮೊಗ್ಗ (Shivamogga) ಕಡೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಗುದ್ದಿಕೊಂಡು ಹೋಗಿದೆ. ಘಟನೆಯಲ್ಲಿ ಬೈಕ್ ರೈಡ್ ಮಾಡುತ್ತಿದ್ದ ವನಿತಾಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಾಯಿ ಉಮಾದೇವಿ ಸೊಂಟದ ಮೇಲೆ ಬಸ್ ಹರಿದಿದೆ. ಪರಿಣಾಮ ಉಮಾದೇವಿ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಗಾಯಾಳು ವನಿತಾ ಕೊಟ್ಟ ದೂರಿನ ಆಧಾರದ ಮೇಲೆ ಮಲ್ಲೇಶ್ವರಂ ಸಂಚಾರಿ ಪೊಲೀಸರು ಕೆಎಸ್ಆರ್ ಟಿಸಿ (KSRTC) ಬಸ್ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಹೈಕೋರ್ಟ್ (Highcourt) ಎಷ್ಟೇ ಛೀಮಾರಿ ಹಾಕಿದ್ರೂ ಬಿಬಿಎಂಪಿ (BBMP) ತಲೆ ಕೆಡಿಸಿಕೊಳ್ತಾನೆ ಇಲ್ಲ. ಇದರ ಪರಿಣಾಮ ಆಗಾಗ ಸಾವು ನೋವುಗಳು ಸಂಭವಿಸುತ್ತಲೇ ಇರುತ್ತವೆ. ಬೆಂಗಳೂರಿನ ಪೂರ್ವ ವಲಯದಲ್ಲಿ ಗುಂಡಿಗಳು ಬಾಯ್ತೆರೆದಿವೆ. ಬಿಬಿಎಂಪಿ ಕಮಿಷನರ್ ರೌಂಡ್ಸ್ ಹಾಕಿ ಪರಿಶೀಲನೆ ನಡೆಸಿದ್ರು. ಇದನ್ನೂ ಓದಿ: ಮದ್ಯದ ಅಮಲಿನಲ್ಲಿ ಪತ್ನಿಯನ್ನೇ ಕೊಚ್ಚಿ ಕೊಲೆಗೈದ ಪತಿ
ಕಮಿಷನರ್ ಬರ್ತಾರೆ ಅಂತ ಅಧಿಕಾರಿಗಳು ಅನೇಕ ದಿನಗಳಿಂದ ಗುಂಡಿ ಬಿದ್ದಿದ್ದ ರಸ್ತೆಗಳಿಗೆ ಸಿಮೆಂಟ್, ಜಲ್ಲಿ ಹಾಕುವ ಮೂಲಕ ತೇಪೆ ಹಾಕ್ಸಿದ್ರು. ಕಮ್ಮನಹಳ್ಳಿ ಮುಖ್ಯ ರಸ್ತೆ ಬಳಿ ಸ್ಥಳೀಯರು ಕಮಿಷನರ್ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಲ್ಲಿ ಗಂಡಾಗುಂಡಿಗೆ ಅದ್ಯಾವಾಗ ಮುಕ್ತಿ ಸಿಗುತ್ತೋ.. ಜನ ನಿಟ್ಟುಸಿರು ಬಿಟ್ಟು ಯಾವಾಗ ಓಡಾಡುವಂತಾಗುತ್ತೋ ಕಾದು ನೋಡಬೇಕು.