ಬೆಳಗಾವಿ: ಹೆಣ್ಣು ಅಬಲೆಯಲ್ಲ ಸಬಲೆ ಎಂದು ಆಗಾಗ ಹೆಣ್ಣುಮಕ್ಕಳು ಸಾಬೀತು ಮಾಡುತ್ತಿರುತ್ತಾರೆ. ಹಾಗೆ ಇಲ್ಲೊಬ್ಬ ಯುವತಿ ಕುಟುಂಬದ ನಿರ್ವಹಣೆಗಾಗಿ ದಿನನಿತ್ಯ ದೋಣಿ ಚಲಾಯಿಸುತ್ತಿದ್ದಾರೆ.
ಜಿಲ್ಲೆಯ ಅಥಣಿ ತಾಲೂಕಿನ ಮುಳವಾಡ ಗ್ರಾಮದ ನಿವಾಸಿ ರೇಖಾ, ಅಂಬಿಗನ ಪಾತ್ರ ನಿಭಾಯಿಸುತ್ತಿದ್ದಾರೆ. ಇವರು ಕಳೆದ 12 ವರ್ಷಗಳಿಂದ ಕುಟುಂಬ ನಿರ್ವಹಣೆಗಾಗಿ ಕೃಷ್ಣಾ ನದಿ ತೀರದಲ್ಲಿ ದೋಣಿ ಚಲಾಯಿಸುವ ಕಾಯಕವನ್ನು ಮಾಡಿಕೊಂಡು ಬರುತ್ತಿದ್ದಾರೆ.
ರೇಖಾ ತಂದೆಯ ಸಾವಿನ ನಂತರ ಕುಟುಂಬದ ನಿರ್ವಹಣೆಗಾಗಿ ಅಜ್ಜಿ ಕೃಷ್ಣಾಬಾಯಿಯವರ ಜೊತೆ ಈ ಕೆಲಸವನ್ನು ಮಾಡಲು ಆರಂಭಿಸಿದರು. ಮುಳವಾಡ ಹಾಗೂ ಚಂಚಿಲಿ ಮಧ್ಯೆ ನದಿ ತೀರದಲ್ಲಿ ಇವರು ದೋಣಿಯನ್ನು ಚಲಾಯಿಸುತ್ತಿದ್ದಾರೆ.
ಚಿಂಚಲಿ ಗ್ರಾಮದ ಮಾಯಕ್ಕಾದೇವಿಯ ದರ್ಶನವನ್ನು ಪಡೆಯಲು ಸಾಕಷ್ಟು ಭಕ್ತರು ಪ್ರತಿದಿನ ಬರುತ್ತಿರುತ್ತಾರೆ. ಪ್ರತಿಯೊಬ್ಬರಿಂದ 10 ರೂಪಾಯಿ ಪಡೆದು ಜನರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸುರಕ್ಷಿತವಾಗಿ ತಲುಪಿಸುತ್ತಾರೆ. ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.