ತುಮಕೂರು: ಮಹಿಳೆಯೊಬ್ಬಳು ಗಂಡ ಬೇಕು ಗಂಡ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿಕೊಂಡಿದ್ದಾಳೆ.
ರಿಜಿಸ್ಟರ್ ಮದುವೆಯಾಗಿ, ಏಳು ತಿಂಗಳ ಗರ್ಭಿಣಿಯಾದ ಬಳಿಕ ತನ್ನನ್ನು ಗಂಡ ಬಿಟ್ಟು ಹೋಗಿ ಬೇರೆ ಮದುವೆಯಾಗಿದ್ದಾನೆ. ದಯವಿಟ್ಟು ಅವರನ್ನು ಹುಡುಕಿಕೊಡಿ ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದಾಳೆ.
ತುಮಕೂರು ತಾಲೂಕು ಬೆಳ್ಳಾವಿಯ ಯುವತಿ ದಿವ್ಯಾ ಹಾಗೂ ಇದೇ ಊರಿನಲ್ಲಿ ಬೇಕರಿ ನಡೆಸುತ್ತಿದ್ದ ಪ್ರತಾಪ್ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸಿ ರಿಜಿಸ್ಟರ್ ಮದುವೆ ಆಗಿದ್ದರು. ಅಲ್ಲದೆ ಈಗ ದಿವ್ಯಾ ಏಳು ತಿಂಗಳು ತುಂಬು ಗರ್ಭಿಣಿ. ಈ ನಡುವೆ ಕಳ್ಳ ಪ್ರತಾಪ್ ಚಿಕ್ಕಮಗಳೂರು ಮೂಲದ ಯುವತಿಯನ್ನು ಮದುವೆಯಾಗಿದ್ದಾನೆ.
ಮದುವೆಯಾದ ಬಳಿಕ ಅಲ್ಲಿಂದ ದಿವ್ಯಾಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾನೆ. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ದಿವ್ಯಾ ಈಗ ಅನಾಥೆಯಾಗಿದ್ದಾಳೆ. ದಿಕ್ಕು ದೆಸೆ ಇಲ್ಲದೆ ಕಂಗಾಲಾಗಿದ್ದಾಳೆ. ಹಾಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿವೇದನೆ ಮಾಡಿಕೊಳ್ಳುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.