ವಿಜಯಪುರ: ಕೌಟುಂಬಿಕ ಕಲಹದ ಬಳಿಕ ಅನುಮಾನಾಸ್ಪದವಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಮನಗೂಳಿ ಸಮೀಪದ ಇಸ್ಲಾಂಪುರ ತಾಂಡಾ 1ರಲ್ಲಿ ನಡೆದಿದೆ.
ಇಸ್ಲಾಂಪುರ ತಾಂಡಾ ನಿವಾಸಿ ಲಕ್ಷ್ಮಿಬಾಯಿ ರವಿ ರಜಪೂತ್ ಮೃತ ಮಹಿಳೆ. ಹಲವು ದಿನಗಳಿಂದ ಲಕ್ಷ್ಮಿಬಾಯಿಗೆ ಗಂಡನ ಸಹೋದರ ಶಿವರಾಜ್ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೆ ಶಿವರಾಜ್ ಪ್ರತಿನಿತ್ಯ ಲಕ್ಷ್ಮಿಬಾಯಿಗೆ ಮಂಚಕ್ಕೆ ಬಾ ಎಂದು ಪೀಡಿಸುತ್ತಿದ್ದ ಎನ್ನಲಾಗಿದೆ.
12 ವರ್ಷಗಳ ಹಿಂದೆ ರವಿ ಅವರನ್ನು ಲಕ್ಮಿಬಾಯಿ ಮದುವೆ ಆಗಿದ್ದರು. ಆದ್ರೆ ಆರು ವರ್ಷದ ಹಿಂದೆ ಪತಿ ರವಿಗೆ ಪ್ಯಾರಲಿಸಿಸ್ ನಿಂದಾಗಿ ಹಾಸಿಗೆ ಹಿಡಿದಿದ್ದರು. ಅಂದಿನಿಂದ ಶಿವರಾಜ್ ಕಿರುಕುಳ ಕೊಡ್ತಾ ಇದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಲಕ್ಷ್ಮಿಬಾಯಿ ಮಲಗಿದ್ದ ಕೋಣೆಗೆ ಬಲವಂತಾಗಿ ಶಿವರಾಜ್ ಪ್ರವೇಶಿಸಿದ್ದ. ನಂತರ ಲಕ್ಷ್ಮಿಬಾಯಿ ಸಾವನಪ್ಪಿದ್ದಾರೆ ಅಂತ ಕುಟುಂಬಸ್ಥರು ತಿಳಿಸಿದ್ದಾರೆ.
ಅದ್ರೆ ಮೃತ ದೇಹದ ಮೇಲೆ ಹಲ್ಲೆ ಮಾಡಿದ ಗುರುತುಗಳಿದ್ದು, ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಅನ್ನೋದು ಲಕ್ಷ್ಮಿ ಗಂಡನ ಆರೋಪವಾಗಿದೆ. ಇನ್ನು ಲಕ್ಷ್ಮಿಬಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಹೋದಾಗ ಶಿವರಾಜ್ ಕುಟುಂಬಸ್ಥರು ರವಿ ಕುಟುಂಬಸ್ಥರ ಮೇಲೆ ಹಲ್ಲೆಗೆ ಮುಂದಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಮಹಿಳೆ ಮೃತದೇಹವನ್ನು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.