ಚಿಕ್ಕಬಳ್ಳಾಪುರ: ಸರ್ಕಾರಿ ಖಾಲಿ ಕರಾಬು ಜಾಗದ ವಿವಾದದಿಂದ ಯುವಕನೊಬ್ಬ ಮಹಿಳೆಯನ್ನ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೀತಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 40 ವರ್ಷದ ನಾರಾಯಣಮ್ಮ ಕೊಲೆಯಾದ ಮಹಿಳೆ. ಇದೇ ಗ್ರಾಮದ 24 ವರ್ಷದ ಶಿವಕುಮಾರ್ ಕೊಲೆ ಮಾಡಿ ಪರಾರಿಯಾಗಿರುವ ಯುವಕ. ಅಂದಹಾಗೆ ಗ್ರಾಮದಲ್ಲಿನ ಖಾಲಿ ಖರಾಬು ಜಾಗ ತಮಗೆ ಸೇರಬೇಕು ಅಂತ ನಾರಾಯಣಮ್ಮ ಹಾಗೂ ಶಿವಕುಮಾರ್ ಕುಟುಂಬಸ್ಥರ ನಡುವೆ ಹಲವು ವರ್ಷಗಳಿಂದ ವಾದ-ವಿವಾದಗಳು ನಡೆಯುತ್ತಿತ್ತು. ಈ ಹಿಂದೆ ಸಹ ಈ ಪ್ರಕರಣ ಮೂರು-ನಾಲ್ಕು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಎರಡು ಕಡೆಯವರಿಗೂ ಪೊಲೀಸರು ಬುದ್ಧಿವಾದ ಹೇಳಿ ಗಲಾಟೆ ಮಾಡಿಕೊಳ್ಳದಂತೆ ಮುಚ್ಚಳಿಕೆ ಬರೆಸಿಕೊಂಡು ಕಳಿಸಿದ್ದರು. ಆದರೆ ಇಂದು ಶಿವಕುಮಾರ್ ಖಾಲಿ ಖರಾಬು ಜಾಗದಲ್ಲಿ ಕ್ಲೀನ್ ಮಾಡಲು ಮುಂದಾಗಿದ್ದಾಗ ನಾರಾಯಣಮ್ಮ ಪ್ರಶ್ನೆ ಮಾಡಿದ್ದಾರೆ. ಇಬ್ಬರ ನಡುವೆ ವಾದ-ವಿವಾದ ನಡೆದಿದ್ದು, ಈ ವೇಳೆ ಶಿವಕುಮಾರ್ ಸನಿಕೆಯಿಂದ ತಲೆಗೆ ಹೊಡೆದಿದ್ದಾನೆ. ಇದರಿಂದ ತಲೆಗೆ ಗಂಭೀರವಾಗಿ ಗಾಯವಾದ ಪರಿಣಾಮ ಮಹಿಳೆ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಈ ಘಟನೆ ನಂತರ ಆರೋಪಿ ಶಿವಕುಮಾರ್ ಊರು ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಮಹಿಳೆಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಎಸ್ಪಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಹಿಂದೆ ರಾಜಿ ಪಂಚಾಯತಿ ಮಾಡಿದ್ದರೂ ನಮ್ಮ ಮನೆ ಮಗಳನ್ನ ಕೊಂದು ಬಿಟ್ಟರಲ್ಲ ಅಂತ ಮೃತಳ ಸಂಬಂಧಿಕರು ಪೊಲೀಸರ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv