ಚಂಡೀಗಢ: ಸ್ವಂತ ಅಕ್ಕನೇ ಹಣಕ್ಕಾಗಿ ಮಲಗಿದ್ದ ತಮ್ಮನ ಕುತ್ತಿಗೆ ಹಗ್ಗ ಬಿಗಿದು ಕೊಲೆಗೈದಿರುವ ಅಮಾನವೀಯ ಘಟನೆ ಹರಿಯಾಣದ ಫರೀದಾಬಾದ್ ನಗರದಲ್ಲಿ ನಡೆದಿದೆ.
30 ವರ್ಷದ ತ್ರಿಲೋಕಿ ಎಂಬಾತನೇ ಅಕ್ಕನಿಂದ ಕೊಲೆಯಾದ ದುರ್ದೈವಿ. ತ್ರಿಲೋಕಿ 2016 ನವೆಂಬರ್ ನಲ್ಲಿ ನೋಟ್ ಬ್ಯಾನ್ ಮೊದಲೇ ಅಕ್ಕನಿಗೆ 7.25 ಲಕ್ಷ ರೂ. ಇಟ್ಟುಕೊಳ್ಳುವಂತೆ ನೀಡಿದ್ದನು. ಹಣ ಹಿಂದಿರುಗಿ ಕೇಳಿದ ತಮ್ಮನನ್ನು ಅಕ್ಕ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದಳು.
ತ್ರಿಲೋಕಿ ಸಂಬಂಧಿಯೊಬ್ಬರು ಇದು ಕೊಲೆ ಎಂದು ಅನುಮಾನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗೆ ಕಳಿಸಿದಾಗ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬುವುದು ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದಾಗ ಅಕ್ಕ ತಪ್ಪೊಪ್ಪಿಕೊಂಡಿದ್ದಾಳೆ.
ಏನಿದು ಪ್ರಕರಣ?
ಮೂರು ವರ್ಷದ ಹಿಂದೆ ಪತಿ ತ್ರಿಲೋಕಿಯನ್ನು ತೊರೆದು ಪತ್ನಿ ತವರು ಮನೆ ಸೇರಿದ್ದಳು. ಪತ್ನಿ ದೂರವಾದ ಬಳಿಕ ಮಾನಸಿಕವಾಗಿ ಕುಗ್ಗಿದ ತ್ರಿಲೋಕಿ ಅಕ್ಕನ ಮನೆಯಲ್ಲಿಯೇ ವಾಸವಾಗಿದ್ದನು. 2016 ನವೆಂಬರ್ ನಲ್ಲಿ ನಗರದಲ್ಲಿರುವ ತನ್ನ ನಿವೇಶನವನ್ನು 7.25 ಲಕ್ಷ ರೂ.ಗೆ ಮಾರಾಟ ಮಾಡಿದ ತ್ರಿಲೋಕಿ ಹಣವನ್ನು ಅಕ್ಕನಿಗೆ ನೀಡಿದ್ದನು. ಅಂದೇ ನಾನು ಬೇಡಿದಾಗ ಹಣ ಹಿಂದಿರುಗಿ ಕೊಡುವಂತೆ ತ್ರಿಲೋಕಿ ಹೇಳಿದ್ದನು. ತಮ್ಮನ ಮಾತಿನಂತೆ ಎಲ್ಲ ಹಣವನ್ನು ಅಕ್ಕ ತನ್ನ ಬಳಿಯೇ ಇರಿಸಿಕೊಂಡಿದ್ದಳು.
ಕಳೆದ ಕೆಲವು ದಿನಗಳ ಹಿಂದೆ ತ್ರಿಲೋಕಿ ಹಣವನ್ನು ಹಿಂದಿರುಗಿ ಕೊಡುವಂತೆ ಅಕ್ಕನಿಗೆ ಕೇಳಿದ್ದಾನೆ. ಹಣ ನೀಡಲು ಒಪ್ಪದ ಅಕ್ಕ ಪ್ರತಿದಿನ ಸಬೂಬು ಹೇಳುತ್ತಾ ದಿನ ಮುಂದೂಡುತ್ತಿದ್ದಳು. ಹಣದ ವಿಷಯಕ್ಕಾಗಿ ಅಕ್ಕ, ತಮ್ಮನ ನಡುವೆ ಪ್ರತಿದಿನ ಗಲಾಟೆ ನಡೆಯುತ್ತಿತ್ತು.
ಶುಕ್ರವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದ ತ್ರಿಲೋಕಿ ಹಣದ ವಿಚಾರಕ್ಕಾಗಿ ಅಕ್ಕನೊಂದಿಗೆ ಗಲಾಟೆ ಮಾಡಿಕೊಂಡಿದ್ದಾನೆ. ಕೋಣೆಯೊಳಗೆ ಹೋದ ತ್ರಿಲೋಕಿ ನಿದ್ದೆಗೆ ಜಾರಿದ್ದಾನೆ. ಈ ವೇಳೆ ನಶೆಯಲ್ಲಿ ನಿದ್ದೆಗೆ ಜಾರಿದ್ದ ತಮ್ಮನ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆಗೈದು ನಿದ್ದೆಗೆ ಜಾರಿದ್ದಾಳೆ. ಬೆಳಗ್ಗೆ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿ ಅಂತ್ಯಕ್ರಿಯೆಗೂ ವ್ಯವಸ್ಥೆ ಮಾಡಿಕೊಂಡಿದ್ದಳು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv