ಬೆಂಗಳೂರು: ಗ್ಯಾಸ್ ದರ ಏರಿಕೆಯ ಬಗ್ಗೆ ಕೇಂದ್ರದ ವಿರುದ್ಧ ಯೂತ್ ಕಾಂಗ್ರೆಸ್ ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿ ಓರ್ವ ಮಹಿಳೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗ್ಯಾಸ್ ದರ ಏರಿಕೆ ಬಗ್ಗೆ ವ್ಯಂಗ್ಯ ಮಾಡಲು ರಸ್ತೆ ಮಧ್ಯದಲ್ಲಿಯೇ ಅಡುಗೆ ಮಾಡಲು ಬೆಂಕಿ ಹಚ್ಚಲು ಹೋದಾಗ ಆಕಸ್ಮಿಕವಾಗಿ ಸುಮಂತಾ ಎಂಬುವರ ಬಟ್ಟೆಗೆ ಬೆಂಕಿ ತಗುಲಿದೆ. ಇದರ ಪರಿಣಾಮ ಅವರ ಮುಖಕ್ಕೆ ಗಂಭೀರವಾಗಿ ಗಾಯವಾಗಿದೆ. ತಕ್ಷಣವೇ ಅವರನ್ನು ಕಾರ್ಯಕರ್ತರು ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯಕ್ಕೆ ಸುಮಂತಾ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಸರ್ಕಾರ ಎಲ್ಪಿಜಿ ದರ ಹಾಗೂ ದಿನಸಿ ಬೆಲೆ ಏರಿಕೆ ಮಾಡಿದೆ ಎಂದು ಸರ್ಕಾರದ ನೀತಿಗಳ ವಿರುದ್ಧ ಯುವ ಕಾಂಗ್ರೆಸ್ನ ಅಧ್ಯಕ್ಷ ರಘುವೀರ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು. ನೂರಾರು ಯುವ ಕಾರ್ಯಕರ್ತರು ಸೇರಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಎಲ್ಪಿಜಿ ಸಿಲಿಂಡರ್ ಹಾಗೂ ತರಕಾರಿ ಪ್ರದರ್ಶಿಸಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ರು. ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ರು.
ಇಷ್ಟಾದರೂ ಪ್ರತಿಭಟನಾಕಾರರು ಮತ್ತೆ ಕಟ್ಟಿಗೆಗಳಿಂದ ಅಡುಗೆ ಮಾಡಲು ಮುಂದಾದ್ರು. ಅಷ್ಟೇ ಅಲ್ಲದೇ ಪ್ರತಿಭಟನಾ ಸ್ಥಳದಲ್ಲಿ ತೀವ್ರ ಗೊಂದಲ ಉಂಟಾಗಿ, ವರದಿಗಾರರು ಬೆಂಕಿ ಅವಘಡವನ್ನು ವಿಡಿಯೋ ಮಾಡಲು ಬಿಡದೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕ್ಯಾಮೆರಾವನ್ನು ಒಡೆಯಲು ಯತ್ನಿಸಿದ್ರು.
https://www.youtube.com/watch?v=qJGyi0cWI70