ನೊಯ್ಡಾ: ಪ್ರಿಯತಮನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಯುವತಿಯೊಬ್ಬಳನ್ನು ಗ್ರೇಟರ್ ನೊಯ್ಡಾದ ಧನ್ ಕೌರ್ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೋನಮ್ ಅಲಿಯಾಸ್ ಸೋನು, 37 ವರ್ಷದ ಜಿತೇಂದ್ರ ಸಿಂಗ್ ಎಂಬಾತನನ್ನು ಕೊಲೆ ಮಾಡಿದ್ದಾಳೆ. ಈಕೆಯನ್ನು ಖೇರ್ಲಿ ಕಾಲುವೆಯ ಸೇತುವೆ ಬಳಿ ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲೀಸರ ತಂಡವೊಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಣಕ್ಕೆ ಬೇಡಿಕೆ:
ಮೃತ ಜಿತೇಂದ್ರಗೆ ಕೆಲ ತಿಂಗಳುಗಳ ಹಿಂದೆಯಷ್ಟೇ ಸೋನಮ್ ಪರಿಚಯವಾಗಿದ್ದು, ಇದೀಗ ಕೊಲೆ ಮಾಡುವ ಮೂಲಕ ಆತನ ಅಕ್ರಮ ಸಂಬಂಧ ಕೊನೆಯಾಗಿದೆ. ಸೋನಮ್ ಪರಿಚಯವಾದ ಬಳಿಕ ಆಕೆ ನಿಧಾನವಾಗಿ ಹಣಕ್ಕಾಗಿ ಜಿತೇಂದ್ರ ಬಳಿ ಬೇಡಿಕೆ ಇಡುತ್ತಿದ್ದಳು. ಅಲ್ಲದೇ ಹಣ ನೀಡದಿದ್ದಲ್ಲಿ ನಮ್ಮಿಬ್ಬರ ಸಂಬಂಧದ ಬಗ್ಗೆ ನಿನ್ನ ಪತ್ನಿಗೆ ತಿಳಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಳು. ಹೀಗೆ ಬೆದರಿಕೆ ನೀಡುತ್ತಾ ಸಾವಿರಕ್ಕೂ ಹೆಚ್ಚು ಹಣವನ್ನು ಜಿತೇಂದ್ರ ಕೈಯಿಂದ ಪಡೆದಿದ್ದಳು. ಆದ್ರೆ ಇತ್ತೀಚೆಗೆ ಸೋನಮ್ ಕೇಳಿದಾಗ ಹಣ ನೀಡಲು ಜಿತೇಂದ್ರ ನಿರಾಕರಿಸಿದ್ದನು. ಈ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳವಾಗಿದ್ದು, ಇದರಿಂದ ಸಿಟ್ಟಿಗೆದ್ದ ಸೋನಮ್ ಈ ಕೃತ್ಯ ಎಸಗಿದ್ದಾಳೆ ಅಂತ ದನ್ಕೌರ್ ಪೊಲೀಸ್ ಠಾಣೆಯ ಅಧಿಕಾರಿ ಫಾರ್ಮೂಡ್ ಆಲಿ ಪುಂದಿರ್ ತಿಳಿಸಿದ್ದಾರೆ.
ಉದ್ಯಾನವನದಲ್ಲಿ ಮರ್ಡರ್:
ಶುಕ್ರವಾರ ಮಧ್ಯಾಹ್ನ ನಂತ್ರ ಸೋನಮ್, ಜಿತೇಂದ್ರನನ್ನು ಸ್ಥಳೀಯ ಉದ್ಯಾನವನವೊಂದರಲ್ಲಿ ಭೇಟಿಯಾಗುವಂತೆ ತಿಳಿಸಿದ್ದಳು. ಯಾವುದೋ ಗಂಭೀರ ವಿಚಾರದ ಬಗ್ಗೆ ಚರ್ಚೆ ನಡೆಸಲು ಕರೆದಿರಬಹುಂದು ತಿಳಿದ ಜಿತೇಂದ್ರ, ಬೇಗನೆ ಉದ್ಯಾನವನಕ್ಕೆ ಬಂದಿದ್ದನು. ಈ ವೇಳೆ ಏನೂ ಮಾತಾಡದ ಸೋನಮ್, ಜಿತೇಂದ್ರ ತಲೆಗೆ ಟಿಪಾಯಿ ಕಾಲಿನಿಂದ ಹಿಗ್ಗಾಮುಗ್ಗವಾಗಿ ಥಳಿಸಿದ್ದಾಳೆ. ಇದರಿಂದ ಜಿತೇಂದ್ರ ತಲೆಗೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಜಿತೇಂದ್ರ ಸಾವನ್ನಪ್ಪಿದ್ದಾನೆಂದು ತಿಳಿದ ಬಳಿಕ ಸೋನಮ್ ತನ್ನ ಸ್ಕೂಟರ್ ನಲ್ಲಿ ತೆರಳಿದ್ದಾಳೆ ಅಂತ ಅಧಿಕಾರಿ ವಿವರಿಸಿದ್ದಾರೆ.
ಪರಾರಿಗೆ ಯತ್ನ:
ಇತ್ತ ಘಟನೆಗೆ ಸಂಬಂಧಿಸಿದಂತೆ ಜಿತೇಂದ್ರ ಸಹೋದರ ಸೋನಮ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಅಂತ ತಿಳಿದ ಕೂಡಲೇ, ಆಕೆ ಜಿಲ್ಲೆಯಿಂದಲೇ ಪರಾರಿಯಾಗಲು ಯತ್ನಿಸಿದ್ದಳು. ಆದ್ರೆ ಗ್ರೇಟರ್ ನೊಯ್ಡಾದ ಖೆರ್ಲಿ ಕಾಲುವೆಯ ಸೇತುವೆ ಬಳಿ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇನ್ನು ಆರೋಪಿ ಕೃತ್ಯಕ್ಕೆ ಬಳಸಿದ ಟಿಪಾಯಿ ಕಾಲನ್ನು ವಶಕ್ಕೆ ಪಡೆದಿದ್ದೇವೆ ಅಂತ ಅವರು ಹೇಳಿದ್ದಾರೆ.
ರೈತ ಕುಟುಂಬದವನಾಗಿರೋ ಜಿತೇಂದ್ರ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾನೆ. ಸದ್ಯ ಆರೋಪಿ ಸೋನಮ್ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ಪುಂದಿರ್ ಹೇಳಿರುವುದಾಗಿ ವರದಿಯಾಗಿದೆ.