ಥಾಣೆ: ಮಾಜಿ ಪ್ರಿಯಕರನ ಮೇಲೆ ಕಾರ್ ಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆತನ ಪ್ರಿಯಕರನನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಇದನ್ನು ಅಪಘಾತ ಎಂದು ತಿಳಿಯಲಾಗಿತ್ತು. ಆದ್ರೆ ಬಳಿಕ ಇದೊಂದು ಯೋಜಿತ ಸಂಚು ಎಂಬುದು ಗತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.
ನವೆಂಬರ್ 18ರಂದು ಈ ಕೊಲೆ ನಡೆದಿತ್ತು. 46 ವರ್ಷದ ರಾಮ್ಜೀ ಶರ್ಮಾ ಕೊಲೆಯಾದ ವ್ಯಕ್ತಿ. ಥಾಣೆಯ ಅಜಾದ್ ನಗರ್ ಪ್ರದೇಶದಲ್ಲಿ ಬೆಳಗ್ಗಿನ ಜಾವ ವಾಕಿಂಗ್ ಮಾಡುವಾಗ ಶರ್ಮಾ ಮೇಲೆ ಕಾರ್ ಹರಿಸಲಾಗಿತ್ತು. ಘಟನೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಶರ್ಮಾ ಒಂದು ತಿಂಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಜಯಪ್ರಕಾಶ್ ಮಂಗ್ರು ಚವಾನ್(32) ಹಾಗೂ ಸುಮಾರಿ ಯಾದವ್ (45) ಬಂಧಿತ ಆರೋಪಿಗಳು. ಜಯಪ್ರಕಾಶ್ ಕಾರ್ ಚಾಲಕನಾಗಿ ಕೆಲಸ ಮಾಡ್ತಿದ್ದ. ಸುಮಾರಿ ಯಾದವ್ ವಿವಾಹಿತಳಾಗಿದ್ದು ಐವರು ಮಕ್ಕಳಿದ್ದಾರೆ. ಈಕೆಗೆ ಹಲವು ಅಕ್ರಮ ಸಂಬಂಧಗಳಿದ್ದು, ಮಾಜಿ ಪ್ರಿಯಕರ ಶರ್ಮಾನನ್ನು ಕೊಲೆ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಮೋಟಾರು ವಾಹನ ಕಾಯ್ದೆ ಹಾಗೂ ಐಪಿಸಿ ಯ ಸೂಕ್ತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖೆ ಮಾಡುವ ಸಂದರ್ಭದಲ್ಲಿ ಇದೊಂದು ಯೋಜಿತ ಸಂಚು ಎಂಬ ಬಗ್ಗೆ ಅನುಮಾನ ಮೂಡಿತ್ತು ಎಂದು ಡಿಸಿಪಿ ಸುನಿಲ್ ಲೋಖಂಡೆ ಹೇಳಿದ್ದಾರೆ.
ಕಾರ್ ರಿಪೇರಿಯಿಂದ ಅನುಮಾನ: ಅಪಘಾತದ ನಂತರ ವಾಹನವನ್ನ ರಿಪೇರಿ ಮಾಡಿಸಲಾಗಿತ್ತು. ಜೊತೆಗೆ ವಾಹನದ ಬಣ್ಣ ಬದಲಾಯಿಸಿದ್ದರಿಂದ ಅನುಮಾನ ಹುಟ್ಟಿತ್ತು. ಅಪಘಾತ ನಡೆದ ಕೆಲವು ದಿನಗಳ ಬಳಿಕ ಸೂಕ್ತ ಮಾಹಿತಿ ಆಧರಿಸಿ ಪೊಲೀಸರು ಕಾರನ್ನ ಪತ್ತೆ ಮಾಡಿದ್ರು. ಆದ್ರೆ ಆಶ್ಚರ್ಯವೆಂಬಂತೆ ಕಾರನ್ನು ಆಗಲೇ ರಿಪೇರಿ ಮಾಡಿಸಲಾಗಿತ್ತು. ಕನ್ನಡಿ ಹಾಗೂ ಫಾಗ್ ಲ್ಯಾಂಪ್ ಬದಲಾಯಿಸಲಾಗಿತ್ತು. ಡೆಂಟ್ ಕೂಡ ಸರಿಪಡಿಸಿ, ಹೊಸದಾಗಿ ಪೇಂಟ್ ಮಾಡಿಸಲಾಗಿತ್ತು. ಇದರಿಂದ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಲ್ಲದೆ ಮೃತ ಶರ್ಮಾ ಅವರ ಮಗ ತನ್ನ ತಂದೆ ಲವರ್ ಜೊತೆ ಫೋನ್ನಲ್ಲಿ ಗಂಟೆಗಟ್ಟಲೆ ಮಾತಾಡುತ್ತಿದ್ದರು. ಅಪಘಾತಕ್ಕೆ ಕಲ ದಿನಗಳ ಮುಂಚೆ ಮಾತಾಡುತ್ತಿರಲಿಲ್ಲ ಎಂದು ಹೇಳಿದ್ದ. ಇದರಿಂದ ಹಿರಿಯ ಇನ್ಸ್ ಪೆಕ್ಟರ್ಗಳಾದ ಸತ್ತಾ ಧೋಲೆ ಹಾಗೂ ನಸೀರ್ ಕುಲಕರ್ಣಿ ಅವರಿಗೆ ಅನುಮಾನ ಮೂಡಿತ್ತು. ಜೊತೆಗೆ ಶರ್ಮಾ ಫೋನ್ ಪರಿಶೀಲಿಸಿದಾಗ ಸುಮಾರಿ ಯಾದವ್ ನಂಬರ್ ಸಿಕ್ಕಿತ್ತು.
ನಮಗೆ ಮಹಿಳೆಯ ನಂಬರ್ ಸಿಕ್ಕಿತ್ತು. ನಂತರ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದಾಗಿ ಘಟನೆ ನಡೆದ ಸಂದರ್ಭದಲ್ಲಿ ಶರ್ಮಾ ಹಾಗೂ ಚೌಹಾನ್ಗೆ ಅತೀ ಹೆಚ್ಚು ಕರೆಗಳನ್ನ ಮಾಡಿರುವುದು ತಿಳಿಯಿತು. ನಂತರ ಆಕೆಯನ್ನು ವಿಚಾರಣೆಗೆ ಕರೆದೆವು ಎಂದು ಪೊಲೀಸರು ಹೇಳಿದ್ದಾರೆ.
ವಿಚಾರಣೆ ವೇಳೆ ಸುಮಾರಿ ಶರ್ಮಾ ಸೂಕ್ತ ಉತ್ತರಗಳನ್ನ ನೀಡುವಲ್ಲಿ ವಿಫಲಳಾಗಿದ್ದಳು. ನಂತರ ಸತ್ಯಾಂಶವನ್ನ ಬಾಯ್ಬಿಟ್ಟಳು. ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಶರ್ಮಾ ಆಕೆಗೆ ಕಿರುಕುಳ ನೀಡುತ್ತಿದ್ದ. ಅಲ್ಲದೆ ಬೆಳಗ್ಗಿನ ವಾಕಿಂಗ್ ಸಮಯದಲ್ಲಿ ಆಕೆ ಹಾಗೂ ಆಕೆಯ ಗಂಡನನ್ನು ಹಿಂಬಾಲಿಸಿ ಬರುತ್ತಿದ್ದ. ಇದರಿಂದ ಬೇಸತ್ತು ತನ್ನ ಪ್ರಿಯಕರ ಚೌಹಾನ್ ಜೊತೆ ಸೇರಿ ಕೊಲೆ ಮಾಡಿ, ಅಪಘಾತ ಎಂದು ಬಿಂಬಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚೌಹಾನ್ ಕೆಲವು ದಿನಗಳ ಕಾಲ ಶರ್ಮಾ ಚಲನವಲನವನ್ನು ಗಮನಿಸಿದ್ದ. ಅದರಂತೆ ನವೆಂಬರ್ 18ರಂದು ಶರ್ಮಾ ಮೇಲೆ ತನ್ನ ಕಾರ್ ಹರಿಸಿ ಪರಾರಿಯಾಗಿದ್ದ. ಸದ್ಯ ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.