ಬೆಂಗಳೂರು: ಒಂಟಿ ಮಹಿಳೆಯ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಗಾಯತ್ರಿ ನಗರದಲ್ಲಿ ನಡೆದಿದೆ.
40 ವರ್ಷದ ಮಂಜುಳ ಕೊಲೆಯಾದ ಮಹಿಳೆ. ಮಂಜುಳ ಚೀಟಿ ವ್ಯವಹಾರ ಮಾಡಿಕೊಂಡಿದ್ದು, ಆರು ತಿಂಗಳಿನಿಂದ ಗಾಯತ್ರಿ ನಗರದಲ್ಲಿ ಮನೆ ಮಾಡಿಕೊಂಡು ಮಗನೊಂದಿಗೆ ವಾಸವಾಗಿದ್ದರು. ಮಧ್ಯಾಹ್ನ ದುಷ್ಕರ್ಮಿಗಳು ಮಂಜುಳ ಮನೆಯಲ್ಲಿ ಒಂಟಿಯಾಗಿದ್ದಾಗ ಹೋಗಿ ಚಾಕುವಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪಕ್ಕದ ಮನೆಯ ಮಹಿಳೆ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಆ ಮಹಿಳೆ ಮಗನಿಗೆ ಕರೆ ಮಾಡಿ ಕೊಲೆಯಾಗಿರುವ ವಿಷಯ ತಿಳಿಸಿದ್ದಾರೆ. ಮಗ ಮನೆಗೆ ಬಂದು ನೋಡಿದಾಗ ಮಂಜುಳಾ ಶವ ರಕ್ತದ ಮಡುವಿನಲ್ಲಿ ಬೆಡ್ ರೂಂನಲ್ಲಿ ಬಿದ್ದಿದೆ. ಮಗ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯ ನಗರ ಠಾಣೆಯ ಪೊಲೀಸರು ಹಂತಕರಿಗಾಗಿ ವಿಶೇಷ ಬಲೆ ಬೀಸಿದ್ದಾರೆ. ಪರಿಚಯಸ್ಥರೇ ಕೊಲೆ ನಡೆಸಿರುವ ಅನುಮಾನ ವ್ಯಕ್ತವಾಗಿವೆ.