ಶಿವಮೊಗ್ಗ: ಕೆಎಸ್ಆರ್ ಟಿಸಿ ಬಸ್ ಚಾಲಕನ ಅಜಾಗರೂಕ ಡ್ರೈವಿಂಗ್ ನಿಂದಾಗಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗದ ಸಂಗೊಳ್ಳಿರಾಯಣ್ಣ ವೃತ್ತದಲ್ಲಿ ನಡೆದಿದೆ.
ಮಲ್ಲಿಕಾ ಬೇಗಂ (35) ಮೃತ ಮಹಿಳೆಯಾಗಿದ್ದು, ನಗರದ ಟ್ಯಾಂಕ್ ಮೊಹಲ್ಲಾದ ಎರಡನೇ ತಿರುವಿನ ರಸ್ತೆ ದಾಟಲು ನಿಂತಿದ್ದ ವೇಳೆ ಅಪಘಾತ ಸಂಭವಿಸಿದೆ.
ಕೆಎಸ್ಆರ್ ಟಿಸಿ ಚಾಲಕ ವೇಗವಾಗಿ ಬಸ್ ಚಲಾಯಿಸಿಕೊಂಡು ಬಂದು ತಿರುವಿನಲ್ಲಿ ಕ್ರಾಸ್ ಮಾಡಲು ಹೋದಾಗ (ಬಾಂಡ್ ಕಟ್) ರಸ್ತೆ ಬದಿ ನಿಂತಿದ್ದ ಮಲ್ಲಿಕಾ ಬೇಗಂ ಅವರಿಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬೇಗಂ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಬೇಗಂ ಅವರಿಗೆ ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ.
ಮಲ್ಲಿಕಾ ಬೇಗಂ ಮೃತಪಟ್ಟ ಕಾರಣ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಂಚಾರಿ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದರು. ನಿರ್ಲಕ್ಷ್ಯದ ಚಾಲನೆ ಮಾಡಿ ಮಹಿಳೆ ಸಾವಿಗೆ ಕಾರಣರಾದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಕುರಿತು ನಗರದ ಪೂರ್ವ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.