ಕಲಬುರಗಿ: ವೈದ್ಯರು ಸಕಾಲದಲ್ಲಿ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ತವರು ಜಿಲ್ಲೆಯಾದ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.
ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ವಿಜಯಲಕ್ಷ್ಮೀ ನಿಂಬಾಳಕರ ಅವರು ಮೃತ ಪಟ್ಟಿದ್ದಾರೆ. ಇವರು ಬುಧವಾರ ಬೆಳಗ್ಗೆ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದು ನಂತರ ಅನಾರೋಗ್ಯದ ಸಮಸ್ಯೆಯಿಂದ ಕೂಡಲೇ ಕಲಬುರಗಿ ಜಿಲ್ಲಾಸ್ಪತ್ರೆಗೆ ಬೆಳಗ್ಗೆ 10 ಗಂಟೆಗೆ ದಾಖಲಾಗಿದ್ದಾರೆ.
ಆದರೆ ಕಲಬುರಗಿ ಜಿಲ್ಲಾಸ್ಪತ್ರೆಯ ವೈದ್ಯರು ಮಧ್ಯಾಹ್ನ 2 ಗಂಟೆವರೆಗೂ ಚಿಕಿತ್ಸೆ ನೀಡಲು ಮುಂದೆ ಬಂದಿಲ್ಲ. ನಂತರ ದಲಿತ ಸೇನೆ ಮುಖಂಡ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಕರೆ ಮಾಡಿ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಹೇಳಿದ್ದಾರೆ.
ಸಚಿವರ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಮೂರು ಜನ ವೈದ್ಯರು ಚಿಕಿತ್ಸೆ ನೀಡಲು ಬಂದಿದ್ದಾರೆ. ಚಿಕಿತ್ಸೆ ತಡವಾದ ಪರಿಣಾಮ ವಿಜಯಲಕ್ಷ್ಮೀ ರಾತ್ರಿ 10 ಗಂಟೆ ಸುಮಾರಿಗೆ ಸಾವನಪ್ಪಿದ್ದಾರೆ. ಈ ಸಾವಿಗೆ ಆಸ್ಪತ್ರೆಯ ವೈದ್ಯರು ಕಾರಣ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.