ಕಲಬುರಗಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ನಗರದ ವಿಠ್ಠಲ್ ನಗರದಲ್ಲಿ ನಡೆದಿದೆ.
ಶ್ವೇತಾ(29) ಮನೆಯ ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಗೃಹಿಣಿ. ಆದರೆ ಶ್ವೇತಾ ಪೋಷಕರು ನಮ್ಮ ಮಗಳದ್ದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸುತ್ತಿದ್ದಾರೆ.
ಶ್ವೇತಾ ಮೂಲತಃ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನವರು. ಇವರಿಗೆ 5 ವರ್ಷಗಳ ಹಿಂದೆ ಅದೇ ಜಿಲ್ಲೆಯ ತೆಕ್ಕಲಕೋಟೆ ಗ್ರಾಮದ ಪ್ರಶಾಂತ್ ಜೊತೆ ವಿವಾಹವಾಗಿತ್ತು. ಪ್ರಶಾಂತ್ ಟು-ವೀಲರ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ನಷ್ಟವಾಗಿದ್ದರಿಂದ ನಂತರ ಕಲಬುರಗಿ ನಗರದ ಹೊಂಡಾ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳಿಂದ ತಾಯಿ ಮನೆಯಲ್ಲಿದ್ದ ಶ್ವೇತಾ ಇತ್ತೀಚೆಗೆ ಕಲಬುರಗಿ ಗೆ ಹೋಗಿದ್ದರು. ಆದರೆ ಇಂದು ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಶ್ವೇತಾ ಪೋಷಕರು ಗಂಡ ಮತ್ತು ಆತನ ಕುಟುಂಬದವರು ಹಣಕ್ಕಾಗಿ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಘಟನೆ ಸಂಬಂಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.