ಹೈದರಾಬಾದ್: ವರದಕ್ಷಿಣೆ ಕಿರುಕುಳದಿಂದ 23 ವರ್ಷದ ವಿವಾಹಿತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಗುಂಟೂರು ಗ್ರಾಮದಲ್ಲಿ ನಡೆದಿದೆ.
ಪ್ರಿಯಾಂಕ ಆತ್ಮಹತ್ಯೆಗೆ ಶರಣಾದ ವಿವಾಹಿತೆ. ಪ್ರಿಯಾಂಕ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ತಾಯಿ ನೋಡಿದ್ದು, ತಕ್ಷಣ ಕುಟುಂಬದವರು ಚಿಲಕಲುರಿಪೇಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯಾಂಕ ಮೃತಪಟ್ಟಿದ್ದಾರೆ.
ಮೃತ ಪ್ರಿಯಾಂಕ ಕಳೆದ ವರ್ಷ ಮಾರ್ತೂರ್ ನಿವಾಸಿ ನವೀನ್ ಜೊತೆ ವಿವಾಹವಾಗಿದ್ದರು. ಪ್ರಿಯಾಂಕ ಮತ್ತು ನವೀನ್ ಪ್ರೀತಿಸಿದ್ದು, ಪ್ರಿಯಾಂಕ ಕುಟುಂಬದವರು ಮೊದಲಿಗೆ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಪೋಷಕರು ಮಗಳಿಗಾಗಿ ಒಪ್ಪಿ ಇಬ್ಬರಿಗೂ ಮದುವೆ ಮಾಡಿಸಿದ್ದರು. ಆದರೆ ಮದುವೆಯಾದ ಒಂದು ವರ್ಷದಲ್ಲಿ ಪ್ರಿಯಾಂಕ ಮೃತಪಟ್ಟಿದ್ದಾಳೆ. ಪ್ರಿಯಾಂಕ ಕುಟುಂಬದ ಸದಸ್ಯರು ಆಕೆಯ ಪತಿ ಮನೆಯವರೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೀನ್ ಗ್ರಾನೈಟ್ ವ್ಯವಹಾರ ಮಾಡಿಕೊಂಡು ಮಾರ್ತುರ್ ನಲ್ಲಿ ನೆಲೆಸಿದ್ದನು. ಮದುವೆಯಾದ ನಂತರ ಪ್ರಿಯಾಂಕಳಿಗೆ ಅವಳ ಅತ್ತೆ-ಮಾವ ವರದಕ್ಷಿಣೆ ತರಲು ಒತ್ತಾಯಿಸುತ್ತಿದ್ದರು. ಇದರಿಂದ ನವೀನ್ ಮತ್ತು ಪ್ರಿಯಾಂಕ ನಡುವೆ ಭಿನ್ನಾಭಿಪ್ರಾಯವಿತ್ತು. ಅಷ್ಟೇ ಅಲ್ಲದೇ ವರದಕ್ಷಿಣೆ ವಿಷಯದಲ್ಲಿ ನವೀನ್ ಪ್ರತಿದಿನ ಕಿರುಕುಳ ನೀಡುತ್ತಿದ್ದನು ಎಂದು ಪ್ರಿಯಾಂಕ ತಾಯಿ ರೋಜರಮಣಿ ಹೇಳಿದ್ದಾರೆ.
ತಾಯಿ ತಮ್ಮ ಮನೆಯ ಕಾರ್ಯಕ್ರಮಕ್ಕೆ ಕರೆಯಲೆಂದು ಮಗಳಿಗೆ ಕರೆ ಮಾಡಿದ್ದಾರೆ. ಆದರೆ ಪ್ರಿಯಾಂಕ ಫೋನ್ ರಿಸೀವ್ ಮಾಡಲಿಲ್ಲ. ಈ ವೇಳೆ ಅನುಮಾನಗೊಂಡ ತಾಯಿ ಅವರ ಮನೆಗೆ ಹೋಗಿದ್ದಾರೆ. ಆಗ ಮಗಳು ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅವರ ಅತ್ತೆ-ಮಾವನೇ ನಮ್ಮ ಮಗಳನ್ನು ಕೊಂದಿದ್ದಾರೆ. ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಪ್ರಿಯಾಂಕ ಪೋಷಕರು ಮನವಿ ಮಾಡಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv