– ಪತಿ ಸಾವಿನ ಬೆನ್ನಲ್ಲೆ ಪತ್ನಿ ಆತ್ಮಹತ್ಯೆ
– ಒಂದೂವರೆ ವರ್ಷದ ಮಗು ಅನಾಥ
ಭುವನೇಶ್ವರ: ಪತಿಯ ಸಾವಿನ ನೋವಿನಿಂದ ಪತ್ನಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಅಮಾನವೀಯ ಘಟನೆ ಒಡಿಶಾದ ಖೋರ್ದಾ ಜಿಲ್ಲೆಯಲ್ಲಿ ನಡೆದಿದೆ.
ಖೋರ್ದಾ ಜಿಲ್ಲೆಯ ನಾಚುಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬದಾಪದಾರ್ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರೆಬತಿ (22) ಎಂದು ಗುರುತಿಸಲಾಗಿದೆ. ಬದಾಪದಾರ್ ಗ್ರಾಮದ ನಿವಾಸಿ ಪತಿ ಮಹಾದೇವ್ ಭೋಲಾ (25) ಸಾವಿನ ಸುದ್ದಿ ಕೇಳಿದ ನಂತರ ಆಘಾತದಿಂದ ರೆಬತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಮಹಾದೇವ್ ಮೂರು ವರ್ಷಗಳ ಹಿಂದೆ ರೆಬತಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ ಒಂದೂವರೆ ವರ್ಷ ವಯಸ್ಸಿನ ಮಗುವಿದೆ. ಮಹಾದೇವ್ ಆಂಧ್ರ ಪ್ರದೇಶದ ಖಾಸಗಿ ಸಂಸ್ಥೆಯನ್ನು ಪೋಕ್ಲೈನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಫೆಬ್ರವರಿ 7 ರಂದು ಆಂಧ್ರ ಪ್ರದೇಶದಲ್ಲಿ ಮಹಾದೇವ್ ವಿಷಪೂರಿತ ಹಾವು ಕಡಿದು ಮೃತಪಟ್ಟಿದ್ದರು. ಬಳಿಕ ಕುಟುಂಬದ ಸದಸ್ಯರು ಒಡಿಶಾಗೆ ಮೃತದೇಹವನ್ನು ತಂದು ಶನಿವಾರ ಸಂಜೆ ಅಂತಿಮ ಕ್ರಿಯಾವಿಧಾನವನ್ನು ನೆರವೇರಿಸಿದ್ದರು.
ಇತ್ತ ಪತಿ ಮಹಾದೇವ್ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಪತ್ನಿ ಶನಿವಾರ ರಾತ್ರಿಯೇ ತನ್ನ ಮಗುವನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅರಿಶಿಣದೊಂದಿಗೆ ವಿಷವನ್ನು ಬೆರೆಸಿಕೊಂಡು ಅದನ್ನು ಸೇವಿಸಿದ್ದಾಳೆ. ಮರುದಿನ ಬೆಳಗ್ಗೆ ಭಾನುವಾರ ರೆಬತಿ ಎದ್ದೇಳದ ಕಾರಣ ಕುಟುಂಬದವರು ತಕ್ಷಣವೇ ಟ್ಯಾಂಗಿಯಲ್ಲಿರುವ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಯ ಕುರಿತು ಟ್ಯಾಂಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv