ಮಂಡ್ಯ: ಅಪರಿಚಿತ ಮಹಿಳೆಯೊರ್ವರು ನೇಣು ಹಾಕಿಕೊಂಡ ಘಟನೆ ಜಿಲ್ಲೆಯ ಕೆ.ಆರ್.ಪೇಟೆಯ ಅಗ್ರಹಾರ ಬಡಾವಣೆಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ ಅಗ್ರಹಾರ ಬಡಾವಣೆಯ ಭಾಗ್ಯಮ್ಮ ಎಂಬುವರ ಮನೆಗೆ ಬಂದ ಮಹಿಳೆಯು ತಾನು ಅನಾಥೆ ಎಂದು ಮನೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ ಇಂದು ಬೆಳಗಿನ ಜಾವ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಭಾಗ್ಯಮ್ಮರವರು, ಮಹಿಳೆ ಯಾರು, ಎಲ್ಲಿಯವರು ಎಂಬುದು ಗೊತ್ತಿಲ್ಲ. ತಡರಾತ್ರಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯು ತಾನು ಅನಾಥೆ ಎಂದು ಹೇಳಿಕೊಂಡಿದ್ದಳು. ಹೀಗಾಗಿ ಮಹಿಳೆಗೆ ಆಶ್ರಯ ನೀಡಿದ್ದೆ, ಇಂದು ಮುಂಜಾನೆ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪೇಟೆ ಟೌನ್ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮಹಿಳೆಯ ಎಡಗೈ ಮೇಲೆ ಸುರೇಶ ಎಂಬುವರ ಹೆಸರಿದ್ದು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.