ಚೆನ್ನೈ: 3ನೇ ಪತಿಗೆ ನಿಷ್ಠೆ ತೋರಿಸಲು ಪತ್ನಿಯೊಬ್ಬಳು 2ನೇ ಪತಿಯಿಂದ ಪಡೆದುಕೊಂಡಿದ್ದ ಮಗುವನ್ನು ಸುಟ್ಟು ಹಾಕಿದ ಅಮಾನುಷ ಘಟನೆ ಚೆನ್ನೈನಲ್ಲಿ ನಡೆದಿದೆ.
3ನೇ ಪತಿ, ನೀನು ನನಗೆ ನಿಷ್ಠೆ ತೋರಿಸುವುದಾದ್ರೆ ನಿನ್ನ ಮಗಳನ್ನು ಸುಟ್ಟು ಹಾಕು ಎಂದು ಹೇಳಿದ್ದಾನೆ. ಅದಕ್ಕೆ ಪತ್ನಿ ತನ್ನ 10 ವರ್ಷದ ಹೆಣ್ಣು ಮಗುವನ್ನು ಬೆಂಕಿಯಲ್ಲಿ ಸುಟ್ಟು ಹಾಕಿದ್ದಾಳೆ. ನೆರೆಮನೆಯವರು ಬಾಲಕಿಯ ಕಿರುಚಾಟ ಕೇಳಿಸಿಕೊಂಡು ಸ್ಥಳಕ್ಕೆ ಓಡಿ ಬಂದಿದ್ದಾರೆ. ತಕ್ಷಣ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ 75% ಸುಟ್ಟು ಹೋಗಿದ್ದ ಕಾರಣ ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದಾಳೆ. ಘಟನೆ ಬೆಳಕಿಗೆ ಬರುತ್ತಿದಂತೆ ತಾಯಿ ಮತ್ತು ಮಲತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರಿಬ್ಬರನ್ನು ಕಟ್ಟಿ ಹಾಕಿ ನಗದು, ಚಿನ್ನ ದೋಚಿದ ಖದೀಮರು
ಏನಿದು ಘಟನೆ?: 5ನೇ ತರಗತಿ ವಿದ್ಯಾರ್ಥಿನಿ ಪವಿತ್ರಾ ತನ್ನ ತಾಯಿ ಜಯಲಕ್ಷ್ಮಿ (38) ಮತ್ತು ಮಲತಂದೆ ಪದ್ಮನಾಭನ್ ಅವರೊಂದಿಗೆ ವಾಸಿಸುತ್ತಿದ್ದಳು. ಜಯಲಕ್ಷ್ಮಿ 19 ವರ್ಷದವಳಿದ್ದಾಗ ಮೊದಲು ಪಾಲ್ವಣ್ಣನ್ ಅವರನ್ನು ವಿವಾಹವಾಗಿದ್ದಳು. ಆದರೆ ಆತನನ್ನು ಬಿಟ್ಟು ಅವನ ಕಿರಿಯ ಸಹೋದರ ದುರೈರಾಜ್ ಜೊತೆ ಓಡಿ ಹೋಗಿ ವಿವಾಹವಾದಳು. ಇಬ್ಬರೂ ಮುಂಬೈನಲ್ಲಿ ವಾಸಿಸುತ್ತಿದ್ದರು. ಅಲ್ಲಿ ಜಯಲಕ್ಷ್ಮಿ ಪವಿತ್ರಾಗೆ ಜನ್ಮ ನೀಡಿದಳು.
ಜಯಲಕ್ಷ್ಮಿ, ದುರೈರಾಜ್ ಅವರನ್ನು ಬಿಟ್ಟು ಮಗು ಜೊತೆಗೆ ಚೆನ್ನೈಗೆ ಮರಳಿದ್ದು, ತಿರುವೊಟ್ಟಿಯೂರಿನಲ್ಲಿ ನೆಲೆಸಿದಳು. ನಂತರ ಟ್ಯಾಂಕರ್ ಡ್ರೈವರ್ ಪದ್ಮನಾಭನ್ ಜೊತೆ ಸ್ನೇಹ ಬೆಳೆಸಿದಳು. ಈತನಿಗೆ 9 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ವಿಚ್ಛೇದನ ಪಡೆದುಕೊಂಡಿದ್ದನು. ಆತನಿಗೂ ಇಬ್ಬರು ಮಕ್ಕಳಿದ್ದರು. ಆದರೂ ಜಯಲಕ್ಷ್ಮಿ ಆತನೊಂದಿಗೆ ಜೀವನ ನಡೆಸುತ್ತಿದ್ದಳು. ಆದರೆ ಪದ್ಮನಾಭನ್ ಆಗಾಗ್ಗೆ ಕುಡಿದು ಬಂದು ಜಯಲಕ್ಷ್ಮಿಯೊಂದಿಗೆ ಜಗಳವಾಡುತ್ತಿದ್ದ. ಅದು ಅಲ್ಲದೇ ಆಕೆಯ ನಿಷ್ಠೆಯನ್ನು ಶಂಕಿಸುತ್ತಿದ್ದನು. ಇದನ್ನೂ ಓದಿ: ಕಳ್ಳಮಾರ್ಗದ ಮೂಲಕ ರಾಜ್ಯಪ್ರವೇಶಕ್ಕೆ ಯತ್ನ – ಖಾಸಗಿ ಬಸ್ಗಳ ವಿರುದ್ಧ ಪ್ರಕರಣ ದಾಖಲು
ಈ ಪರಿಣಾಮ ಭಾನುವಾರ ರಾತ್ರಿ, ಪದ್ಮನಾಭನ್ ಆಕೆಯ ನಿಷ್ಠೆಯನ್ನು ಪ್ರಶ್ನಿಸಿದ್ದು, ಪವಿತ್ರಾಳನ್ನು ಸುಟ್ಟು ಹಾಕು ಎಂದು ಹೇಳುತ್ತಾನೆ. ಅದಕ್ಕೆ ಜಯಲಕ್ಷ್ಮಿ ತನ್ನ ಮಗಳನ್ನು ಸೀಮೆಎಣ್ಣೆ ಸುರಿದು ಬೆಂಕಿ ಇಡುತ್ತಾಳೆ. ಬಾಲಕಿಯ ಕಿರುಚಾಟ ಕೇಳಿ ನೆರೆಹೊರೆಯವರು ಮನೆಗೆ ಧಾವಿಸಿದ್ದು, ಬೆಂಕಿ ನಂದಿಸಿ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಪವಿತ್ರಾ 75% ಸುಟ್ಟ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.