ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಸಕಲೇಶಪುರದ (Sakleshpura) ಇಬ್ಬಡಿ ಕೊಣ್ಣೂರು ಗ್ರಾಮದ ಬಳಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಅನಿತಾ (35) ಎಂದು ಗುರುತಿಸಲಾಗಿದೆ. ಭಾನುವಾರ ಬಾಕ್ಸ್ನಲ್ಲಿ ಊಟ ತುಂಬಿಕೊಂಡು ಗದ್ದೆ ಕೆಲಸಕ್ಕೆ ಮಹಿಳೆ ತೆರಳಿದ್ದಳು. ಆದರೆ ರಾತ್ರಿಯಾದರೂ ಆಕೆ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಮಹಿಳೆಯ ಪತಿ ಚಂದ್ರಶೇಖರ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಬಳಿಕ ಹುಡುಕಾಟ ನಡೆಸಿದ್ದ. ಹುಡುಕಾಟ ನಡೆಸುತ್ತಿದ್ದ ವೇಳೆ ಹೊಳೆ ಸಾಲಿನಲ್ಲಿ ಅನಿತಾ ಮೃತದೇಹ ಪತ್ತೆಯಾಗಿತ್ತು.
ಹನ್ನೆರಡು ವರ್ಷದ ಹಿಂದೆ ಇಬ್ಬಡಿ ಕೊಣ್ಣೂರು ಗ್ರಾಮದ ಚಂದ್ರಶೇಖರ್ ಹೆಬ್ಬಸಾಲೆ ಗ್ರಾಮದ ಅನಿತಾ ಜೊತೆ ಮದುವೆಯಾಗಿದ್ದ. ಅಕ್ರಮ ಸಂಬಂಧದ ವಿಚಾರಕ್ಕೆ ಪತ್ನಿಯನ್ನೇ ಚಂದ್ರಶೇಖರ್ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ.
ಎರಡು ವರ್ಷ ಹಿಂದೆ ಜಮೀನು ವಿಚಾರವಾಗಿ ಒಡಹುಟ್ಟಿದ ಅಣ್ಣನ ಪತ್ನಿಯನ್ನೇ ಚಂದ್ರಶೇಖರ್ ಕೊಲೆಗೈದಿದ್ದ.
ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.