– ಅರೆನೆರಳಲ್ಲಿ ಕೊಂಚ ಮಂಕಾದ ಚಂದಿರ
ಬೆಂಗಳೂರು: ಪ್ರತಿ ಹುಣ್ಣಿಮೆಯಂದು ಚಂದಿರ ಪಳಪಳನೆ ಹೊಳೆಯುತ್ತಾನೆ. ಆದರೆ ಬಾನಂಗಳದಲ್ಲಿ ಶುಕ್ರವಾರ ರಾತ್ರಿ 4 ಗಂಟೆಗಳ ಕಾಲ ನಡೆದ ಚಮತ್ಕಾರದಲ್ಲಿ ಚಂದಿರ ಕೊಂಚ ಮಂಕಾಗಿ ಹೋಗಿದ್ದು, ತೋಳನ ವಕ್ರದೃಷ್ಟಿಯಿಂದಾಗಿ ಚಂದಿರನಿಗೆ ಗ್ರಹಣ ಬಡಿದಿತ್ತು.
ಶುಕ್ರವಾರ ರಾತ್ರಿ 10.38 ರಿಂದ ಮುಂಜಾನೆ 2.42ರವರೆಗೂ ಚಂದ್ರ ಭೂಮಿಯ ಅರೆನೆರಳಿನಲ್ಲಿ ಸಿಲುಕಿದ್ದನು. ಈ ನಾಲ್ಕು ಗಂಟೆಗಳ ಕಾಲ ನಡೆದ ಕೌತುಕವನ್ನು ತೋಳ ಚಂದ್ರ ಗ್ರಹಣ, ಪಾರ್ಶ್ವ ಛಾಯಾ ಗ್ರಹಣ, ಮಸುಕಂಚಿನ ಚಂದ್ರಗ್ರಹಣ ಎಂದೆಲ್ಲ ಕರೆಯುತ್ತಾರೆ. ಮಧ್ಯರಾತ್ರಿ 12.40ರ ಸುಮಾರಿಗೆ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಿತ್ತು.
ಈ ಭೂಮಿ-ಚಂದ್ರನ ಆಟ ವಿಶ್ವದ ಕೆಲವೆಡೆ ಮಾತ್ರ ಗೋಚರಿಸಿತು. ಭಾರತ, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ, ಯುರೋಪ್, ಉತ್ತರ ಅಮೆರಿಕದ ಕೆಲ ಪ್ರದೇಶದಲ್ಲಿ ತೋಳ ಚಂದಿರನ ಕೌತುಕತೆಯನ್ನ ಜನ ಕಣ್ತುಂಬಿಕೊಂಡರು. ರಾಜ್ಯದಲ್ಲೂ ತೋಳ ಚಂದಿರನ ವಿಸ್ಮಯ ಜರುಗಿದ್ದು, ಕೆಲವರು ನಿದ್ರೆ ಬಿಟ್ಟು ಈ ಕೌತುಕತೆಯನ್ನ ಕಣ್ತುಂಬಿಕೊಂಡರು. ಬೆಂಗಳೂರಿನ ಟೌನ್ಹಾಲ್, ಲಾಲ್ಬಾಗ್ನಲ್ಲಿ ತೋಳ ಚಂದ್ರಗ್ರಹಣ ವೀಕ್ಷಣೆಗೆ ಅನುವು ಮಾಡಿಕೊಡಲಾಗಿತ್ತು. ವಿದ್ಯಾರ್ಥಿಗಳು ಸೇರಿದಂತೆ ಹಲವರು ಮಧ್ಯರಾತ್ರಿ ಜರುಗಿದ ಚಂದಿರನ ಚಮಾತ್ಕಾರ ನೋಡಿದರು.
2019ರ ಅಂತ್ಯದ ವೇಳೆಗೆ, ಇಡೀ ಜಗತ್ತು ಬೆಂಕಿ ಬಳೆ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿತ್ತು. ಇದಾಗಿ ಕೇವಲ ಎರಡು ವಾರಗಳ ಅಂತರದಲ್ಲಿ ಚಂದ್ರಗ್ರಹಣ ಸಂಭವಿಸಿದೆ. ಹೀಗಾಗಿ ಅತ್ಯಂತ ಕುತೂಹಲಕಾರಿಯಾಗಿ ಜನ ಚಂದ್ರಗ್ರಹಣವನ್ನ ವೀಕ್ಷಿಸಿದರು.
ಚಂದ್ರ ಗ್ರಹಣದ ವಿಶೇಷತೆಗಳೇನು?
– ಈ ಚಂದ್ರ ಗ್ರಹಣಕ್ಕೆ ತೋಳ ಚಂದ್ರ ಗ್ರಹಣ ಎಂದು ಹೆಸರು
– ಜನವರಿ ತಿಂಗಳು ತೋಳಗಳ ಸಂತಾನಾಭಿವೃದ್ಧಿಯ ಸಮಯ
– ಪಾಶ್ಚಾತ್ಯ ದೇಶಗಳಲ್ಲಿ ಜನವರಿ ತಿಂಗಳ ಗ್ರಹಣವನ್ನು ತೋಳ ಗ್ರಹಣ ಎನ್ನುತ್ತಾರೆ
– ಈ ಗ್ರಹಣವನ್ನು ಸಂಪೂರ್ಣ ಚಂದ್ರ ಗ್ರಹಣ ಎನ್ನುವುದಿಲ್ಲ
– ಇದು ನೆರಳಿನ ಗ್ರಹಣ, ಚಂದ್ರನ ಸ್ಥಾನದಲ್ಲಿ ವಿಶೇಷ ಬದಲಾವಣೆ ಇಲ್ಲ
ವೈಜ್ಞಾನಿಕವಾಗಿ ಇದೊಂದು ಖಗೋಳ ಕೌತುಕತೆ. ಇದರಿಂದ ಯಾವುದೇ ಅಪಾಯವಿಲ್ಲ. ಆದರೆ ಜ್ಯೋತಿಷ್ಯಗಳ ಪ್ರಕಾರ ಈ ಚಂದ್ರಗ್ರಹಣ ದೊಡ್ಡ ಅಪಾಯಕರಿಯಂತೆ. ವರ್ಷಾರಂಭದಲ್ಲಿ ಸಂಭವಿಸಿರುವ ಈ ತೋಳ ಚಂದ್ರ ಗ್ರಹಣದಿಂದ ಜಲಗಂಡಾಂತರವಿದೆ ಅಂತ ಭವಿಷ್ಯ ನುಡಿದಿದ್ದಾರೆ.