ಮಡಿಕೇರಿ: ವಿರಾಜಪೇಟೆ ಪಟ್ಟಣದ ಮನೆಯೊಂದಕ್ಕೆ ನುಗ್ಗಿ ಟಿವಿ ಹಾಗೂ ನಗದು ದೋಚಿದ್ದ ಚೋರನನ್ನು ಕಳ್ಳತನ ನಡೆದ 48 ಗಂಟೆಗಳಲ್ಲಿ ಬಂಧಿಸುವಲ್ಲಿ ಕೊಡಗಿನ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲ್ಲುಬಾಣೆಯ ನಿವಾಸಿ ಕೂಲಿ ಕಾರ್ಮಿಕ ಕೆ.ಎಸ್.ನಿಖಿಲ್(22) ಬಂಧಿತ ಆರೋಪಿಯಾಗಿದ್ದು, ಆತನ ಬಳಿಯಿಂದ ಟಿವಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಿರಾಜಪೇಟೆ ಪಟ್ಟಣದ ನಿವಾಸಿ ಸುಬ್ಬಯ್ಯ ಎಂಬವರು ಅ.7 ರಂದು ಹೊಳೆನರಸೀಪುರಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆಯನ್ನು ಗಮನಿಸಿ ಹಿಂಬಾಗಿಲನ್ನು ಮುರಿದು ಒಳ ನುಗ್ಗಿದ ನಿಖಿಲ್ ಟಿವಿ ಹಾಗೂ 1,400 ರೂ. ದೋಚಿ ಪರಾರಿಯಾಗಿದ್ದನು. ಇದನ್ನೂ ಓದಿ: ತಿರುಗುವ ಮನೆ ನಿರ್ಮಿಸಿ ಪತ್ನಿಗೆ ಗಿಫ್ಟ್ ಕೊಟ್ಟ 72ರ ಪತಿ
ಅ.8 ರಂದು ಮನೆಗೆ ಬಂದ ಸುಬ್ಬಯ್ಯ ಅವರು ಕಳ್ಳತನವಾಗಿರುವುದು ತಿಳಿದು ಪೊಲೀಸರಿಗೆ ದೂರು ನೀಡಿದರು. ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಸಹಕಾರದಿಂದ ತನಿಖೆ ಕೈಗೊಂಡ ಪೊಲೀಸರು ಅ.10 ರಂದು ಬೆಳಗ್ಗೆ ವಿರಾಜಪೇಟೆ ಖಾಸಗಿ ಬಸ್ ನಿಲ್ದಾಣದ ಬಳಿ ನಿಖಿಲ್ ನನ್ನು ಬಂಧಿಸಿದರು. ತಪ್ಪೊಪ್ಪಿಕೊಂಡ ಈತನಿಂದ ಟಿವಿ ಮತ್ತು 1,400 ರೂ. ನಗದನ್ನು ವಶಕ್ಕೆ ಪಡೆಯಲಾಯಿತು. ಇದನ್ನೂ ಓದಿ: ಕಾಲುವೆಗೆ ಬಿದ್ದು 10 ವರ್ಷದ ಮಗು ಸಾವು
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಮಾರ್ಗದರ್ಶನದಲ್ಲಿ ವಿರಾಜಪೇಟೆ ಉಪವಿಭಾಗದ ಡಿ.ವೈ.ಎಸ್ಪಿ ನಿರ್ದೇಶನದಲ್ಲಿ ವೃತ್ತ ನಿರೀಕ್ಷಕ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ವಿರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕ ಹೆಚ್.ಎಸ್.ಬೋಜಪ್ಪ, ನಗರ ಠಾಣಾಧಿಕಾರಿಗಳಾದ ಜಗದೀಶ್ ಧೂಳ್ ಶೆಟ್ಟಿ, ಜಿಲ್ಲಾ ಬೆರಳಚ್ಚು ವಿಭಾಗದ ಜಯಕುಮಾರ್, ಸಿಬ್ಬಂದಿಗಳಾದ ಪಿ.ಯು.ಮುನೀರ್, ರಂಜನ್ ಕುಮಾರ್, ಮಧು ಟಿ.ಟಿ. ಗೀತಾ, ಮೋಹನ್ ಟಿ.ಕೆ.ಸಾಗರ್, ಮಂಜುನಾಥ್ ಬಿ.ವಿ ಹಾಗೂ ಮಹಂತೇಶ್ ಎಂ.ಪಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.