ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ಗೌರವವನ್ನು ಭಾರತ ಸರ್ಕಾರ ನೀಡುವ ಸಾಧ್ಯತೆಯಿದೆ.
ಅಭಿನಂದನ್ ಅಲ್ಲದೇ ಬಾಲಕೋಟ್ ದಾಳಿಯಲ್ಲಿ ಕಾರ್ಯನಿರ್ವಹಿಸಿದ್ದ ಮಿಗ್ ಪೈಲಟ್ ಗಳಿಗೂ ವೀರ ಚಕ್ರ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆಗಸ್ಟ್ 15 ಸ್ವತಂತ್ರ್ಯ ದಿನಾಚರಣೆಯಂದು ಮಹತ್ವದ ಘೋಷಣೆ ಮಾಡಲಾಗುವ ಸಾಧ್ಯತೆಯಿದೆ.
ಯುದ್ಧದ ಸಮಯದಲ್ಲಿ ನೀಡುವ ಸೇನೆಯ 3ನೇ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಯುದ್ಧಕಾಲದಲ್ಲಿ ತೋರುವ ಅಪ್ರತಿಮ ಸಾಹಸಕ್ಕೆ ಯೋಧರಿಗೆ ಪರಮವೀರ ಚಕ್ರ, ಮಾಹಾವೀರ ಚಕ್ರ, ವೀರ ಚಕ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಬಾಲಕೋಟ್ ದಾಳಿಯಲ್ಲಿ ಕಾರ್ಯನಿರ್ವಹಿಸಿದ್ದ ಮಿಗ್ ಪೈಲಟ್ ಗಳಿಗೂ ಕೂಡ `ವಾಯು ಸೇನಾ ಪದಕ’ ನೀಡಲು ಸೇನೆ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಎಫ್ 16 ಯುದ್ಧ ವಿಮಾನಗಳು ಭಾರತ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸಿದ್ದರು. ಇದಕ್ಕೂ ಮುನ್ನ ಭಾರತ ಸೇನೆ ಪುಲ್ವಾಮ ಸೈನಿಕರ ಮೇಲೆ ನಡೆದ ದಾಳಿಯ ಸೇಡನ್ನು ತೀರಿಸಿಕೊಳ್ಳಲು ಪಾಕಿಸ್ತಾನದ ಬಾಲಕೋಟ್ ಮೇಲೆ ದಾಳಿ ನಡೆಸಿ ಉಗ್ರರ ನೆಲೆಳನ್ನು ಧ್ವಂಸ ಮಾಡಿತ್ತು.