ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡುವಿನಿಂದ ಸ್ಪರ್ಧಿಸುತ್ತಿರುವುದಕ್ಕೆ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಮಾಕ್ರ್ಸಿಸ್ಟ್(ಸಿಪಿಎಂ) ಬಲವಾಗಿ ವಿರೋಧಿಸಿದೆ.
ಸಿಪಿಎಂ ನೇತೃತ್ವದ ಎಲ್ಡಿಎಫ್ ಈಗಾಗಲೇ ವಯನಾಡುವಿನಲ್ಲಿ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ(ಸಿಪಿಐ) ಪಿ.ಪಿ ಸುನೀರ್ರನ್ನು ಲೋಕಸಮರಕ್ಕೆ ಕಣಕ್ಕಿಳಿಸಲಾಗಿದೆ. ಆದ್ರೆ ಈಗ ರಾಹುಲ್ ಗಾಂಧಿ ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸಿಪಿಎಂ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ನಾಯಕ ಪ್ರಕಾಶ್ ಕಾರಟ್ ಅವರು ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ, ರಾಹುಲ್ ಗಾಂಧಿಯನ್ನು ವಯನಾಡುವಿನಲ್ಲಿ ಸೋಲುವಂತೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಕಾಶ್ ಕಾರಟ್ ಅವರು, ಕಾಂಗ್ರೆಸ್ ತಮ್ಮ ಸಾಮಥ್ರ್ಯವನ್ನು ಪ್ರದರ್ಶಿಸಲು ರಾಹುಲ್ ಅವರನ್ನು ವಯನಾಡುವಿನಿಂದ ಕಣಕ್ಕಿಳಿಸಿದೆ. ಬಿಜೆಪಿಯನ್ನು ಸೋಲಿಸಲು ನಾವು ಒಂದಾದರೆ ಕೇರಳದಲ್ಲಿ ನಮ್ಮ ವಿರುದ್ಧವೇ ರಾಹುಲ್ ಸ್ಪರ್ಧೆ ಮಾಡುತ್ತಿದ್ದಾರೆ. ಕೇರಳದಲ್ಲಿ ಬಿಜೆಪಿ ವಿರುದ್ಧವಾಗಿ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್(ಎಲ್ಡಿಎಫ್) ಕೆಲಸ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಕೇರಳದಲ್ಲಿ ಸಿಪಿಎಂ ವಿರುದ್ಧ ನಿಲ್ಲಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ಸಿನ ಈ ನಿರ್ಧಾರವನ್ನು ನಾವು ವಿರೋಧಿಸುತ್ತೆವೆ. ಅಲ್ಲದೇ ರಾಹುಲ್ರನ್ನು ಈ ಚುನಾವಣೆಯಲ್ಲಿ ಸೋಲಿಸಲು ಶ್ರಮಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ಇದರ ಜೊತೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೂಡ ಕಾಂಗ್ರೆಸ್ ನಿರ್ಧಾರವನ್ನು ಖಂಡಿಸಿದ್ದಾರೆ. ಕೇರಳದಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದರೆ ಅದು ಬಿಜೆಪಿ ವಿರುದ್ಧ ಆಗಲ್ಲ ಸಿಪಿಎಂ ವಿರುದ್ಧವಾಗಿದೆ. ಕೇರಳದಲ್ಲಿ ಕಾಂಗ್ರೆಸ್ಸನ್ನು ಸಿಪಿಎಂ ಮಣಿಸೋದು ಖಚಿತ ಎಂದು ಹೇಳಿದರು.
ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ವಯನಾಡುವಿನಲ್ಲಿ ಕಾಂಗ್ರೆಸ್ಸಿನಿಂದ ಎಂ.ಐ ಶಹನಾವಸ್ ಸ್ಪರ್ಧಿಸಿ 3,77,035 ಮತಗಳನ್ನು ಪಡೆದಿದ್ದರು. ಸಿಪಿಐನ ಸತ್ಯನ್ ವೋಕೆರಿ 3,56,165 ಮತಗಳನ್ನು ಗಳಿಸಿದ್ದರು. ಹಾಗೆಯೇ ಬಿಜೆಪಿಯ ಪಿ.ಆರ್ ರಸ್ಮಿಲ್ನಾಥ್ ಸ್ಪರ್ಧಿಸಿ 80,752 ಮತಗಳನ್ನು ಪಡೆದಿದ್ದರು. 2018ರ ನವೆಂಬರ್ 21 ರಂದು ಶಹನಾವಸ್ ಚೆನ್ನೈ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.