ನವದೆಹಲಿ: ಲಾಕ್ಡೌನ್ ಈಗ ಸ್ವಲ್ಪ ಸಡಿಲವಾಗಿದ್ದು, ಸದ್ಯಕ್ಕೆ ಹಸಿರು ವಲಯ ಬಿಟ್ಟು ಬೇರೆ ಎಲ್ಲೂ ಬಸ್ಸು ಸಂಚಾರವಿಲ್ಲ. ಆದರೆ ಮೇ 20ರ ನಂತರ ಬಸ್ಸು, ಆಟೋ, ಟ್ಯಾಕ್ಸಿ, ರೈಲುಗಳ ಓಡಾಟಕ್ಕೆ ಅವಕಾಶ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಬಸ್ಸು ರೈಲು, ಮೆಟ್ರೋ, ವಿಮಾನ ಸಂಚಾರಕ್ಕೆ ಮೇ 17ರವರೆಗೂ ಕೇಂದ್ರ ಸರ್ಕಾರ ಅನುಮತಿ ನೀಡುವುದು ಅನುಮಾನ. ಯಾವಾಗಿನಿಂದ ಸಮೂಹ ಸಾರಿಗೆಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಉನ್ನತಮಟ್ಟದ ಸಭೆಗಳು ನಡೆಯುತ್ತಿವೆ.
ಸಾರ್ವಜನಿಕ ಸಾರಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರುವುರಿಂದ ಈಗಲೇ ಅನುಮತಿ ನೀಡಬೇಕೋ? ಬೇಡವೋ ಎಂಬ ಚರ್ಚೆ ನಡೆಯುತ್ತಿದೆ. ಆದರೆ ಕೊರೊನಾ ಪ್ರಕರಣಗಳು ಬರುವುದರ ಜೊತೆಗೆ ಗುಣಮುಖರಾಗುತ್ತಿರುವ ಸಂಖ್ಯೆಯೂ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಸಾರ್ವಜನಿಕ ಸಾರಿಗೆ ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.
ಮೂಲಗಳ ಪ್ರಕಾರ, ಮೇ 20ರಿಂದ ಬಸ್ಸು, ಆಟೋ, ಟ್ಯಾಕ್ಸಿ, ರೈಲು, ವಿಮಾನ ಓಡಾಟಕ್ಕೆ ಅವಕಾಶ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಜೂನ್ 1ರಿಂದ ಸಾರ್ವಜನಿಕ ಸಭೆ ಸಮಾರಂಭ, ಥಿಯೇಟರ್, ಮಾಲ್, ಜಿಮ್, ದೇಗುಲ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವ ಸಾಧ್ಯತೆಗಳು ಇವೆ.
ಗೃಹ ಸಚಿವಾಲಯ ರಾಜ್ಯ ಸರ್ಕಾರಗಳ ಜೊತೆ ಚರ್ಚೆ ನಡೆಸಿ ಅಂತಿಮಗೊಳಿಸುವ ಕಾರ್ಯ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.