ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಮುಗಿದ ಮೇಲೆ ಇದೀಗ ರಾಜ್ಯ ಬಿಜೆಪಿಯಲ್ಲಿ ಸಂಘಟನಾತ್ಮಕ ಮತ್ತು ಆಡಳಿತಾತ್ಮಕ ಬದಲಾವಣೆ ಆಗಲಿದೆಯೇ ಎಂಬ ಕುತೂಹಲ ಮೂಡಿದೆ.
ಪಕ್ಷ ಮತ್ತು ಸರ್ಕಾರ ಎದುರಿಸುತ್ತಿರುವ ಈಗಿನ ಸನ್ನಿವೇಶದಲ್ಲಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಉತ್ಸಾಹ ಬರಲು ಏನಾದರೊಂದು ಬದಲಾವಣೆ ಆಗಲೇಬೇಕಿದೆ ಅನ್ನೋ ಭಾವನೆ ಬಹುತೇಕರಲ್ಲಿದೆ. ಸದ್ಯ ರಾಜ್ಯಾಧ್ಯಕ್ಷ ಆಗಿರುವ ನಳಿನ್ ಕುಮಾರ್ ಕಟೀಲ್ರ ಅವಧಿ ಈ ತಿಂಗಳಿಗೆ ಮುಗಿಯಲಿದೆ. ಇದನ್ನೂ ಓದಿ: ತಿಂಗಳಿಗೊಂದು ಹೋರಾಟಕ್ಕೆ ಕಾಂಗ್ರೆಸ್ ಪ್ಲಾನ್!
ಚುನಾವಣಾ ದೃಷ್ಟಿಯಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥರೊಬ್ಬರ ಆಯ್ಕೆ ಜೊತೆಗೆ ಪ್ರಧಾನ ಕಾರ್ಯದರ್ಶಿ ಮಟ್ಟದ ಪದಾಧಿಕಾರಿಗಳಾಗಿ ಕೆಲವರನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಇದರೊಂದಿಗೆ ಆಡಳಿತಕ್ಕೆ ಚುರುಕು ಮುಟ್ಟಿಸಲು ಬೊಮ್ಮಾಯಿ ಸರ್ಕಾರದಲ್ಲೂ ಕೆಲ ಬದಲಾವಣೆ ನಡೆಯಬಹುದು. ಐದು ಖಾಲಿ ಸಚಿವ ಸ್ಥಾನಗಳ ಪೈಕಿ ನಾಲ್ಕು ಭರ್ತಿ ಮಾಡಿಕೊಳ್ಳುವ ಮೂಲಕ ಸಂಪುಟ ವಿಸ್ತರಣೆಗೆ ಪ್ಲಾನ್ ಮಾಡಲಾಗಿದೆ ಎನ್ನಲಾಗಿದೆ.
ಈ ಎರಡೂ ವಿಚಾರಗಳ ಕುರಿತು ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆ ನಡೀತಿದೆ. ಏನು ಬದಲಾವಣೆ ಮಾಡಬೇಕು, ಯಾರ ನೇಮಕ ಮಾಡಬೇಕು ಅಂತ ವರಿಷ್ಠರು ಹಲವು ಆಯಾಮಗಳಲ್ಲಿ ಸಿದ್ಧತೆ ನಡೆಸಿದ್ದು, ರಾಜ್ಯ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವರು ಎನ್ನಲಾಗಿದೆ. ಈ ತಿಂಗಳಾಂತ್ಯದಲ್ಲಿ ಹೈಕಮಾಂಡ್ ನಿರ್ಧಾರ ಪ್ರಕಟವಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.