ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಪೋಸ್ಟ್ ಕಾರ್ಡುಗಳನ್ನು ಕಳುಹಿಸಲಾಗುವುದು ಎಂದು ಬಿಜೆಪಿ ನಾಯಕ ಅರ್ಜುನ್ ಸಿಂಗ್ ದೀದಿಗೆ ತಿರುಗೇಟು ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ಸಿನ ಶಾಸಕರಾಗಿದ್ದ ಅರ್ಜುನ್ ಸಿಂಗ್ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರ್ಪಡೆಯಾಗಿದ್ದರು. ಕೋಲ್ಕತ್ತಾದಲ್ಲಿ ಕೆಲ ದಿನಗಳ ಹಿಂದೆ ಟಿಎಂಸಿಯ ಸಭೆಯ ವೇಳೆ `ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ಘಟನೆ ಖಂಡಿಸಿ ದೀದಿ ನಿವಾಸಕ್ಕೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಅಂಚೆ ಕಾರ್ಡುಗಳನ್ನು ಬಿಜೆಪಿ ನಾಯಕರು ಕಳುಹಿಸಲಿದ್ದಾರೆ ಎನ್ನಲಾಗಿದೆ.
ಅರ್ಜುನ್ ಸಿಂಗ್ ಹಾಗೂ ಬಿಜೆಪಿ ಮುಖಂಡ ಮುಕುಲ್ ರಾಯ್ ಮಗ ಸುಬ್ರಂಗ್ಶು ರಾಯ್ ಟಿಎಂಸಿ ತೊರೆದು ಬಿಜೆಪಿಗೆ ಸೇರಿದ ಬಳಿಕ ಈ ಪ್ರದೇಶದಲ್ಲಿ ತುಂಬಾ ತೊಂದರೆ ನೀಡುತ್ತಿದ್ದಾರೆ ಎಂದು ಟಿಎಂಸಿ ಮುಖಂಡ ಜ್ಯೋತಿಪ್ರಿಯಾ ಮಲಿಕ್ ಆರೋಪಿಸಿದ್ದಾರೆ. ಮಲ್ಲಿಕ್ ಮತ್ತಿತರು ಸಭೆ ನಡೆಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಪರಿಸ್ಥಿತಿ ಕೈ ಮೀರಿದ್ದು, ಪೊಲೀಸರು ಲಾಠಿ ಚಾರ್ಚ್ ನಡೆಸಿರುವುದಾಗಿ ತಿಳಿದುಬಂದಿದೆ.
ಬಂಗಾಳದಲ್ಲಿ ಇಂತಹ ಸಂಸ್ಕೃತಿಯನ್ನು ನೋಡಿರಲಿಲ್ಲ, ಇದು ಬಿಜೆಪಿಯ ಸಂಸ್ಕೃತಿಯಾಗಿದೆ ಎಂದು ಮಲಿಕ್ ಹೇಳಿದ್ದು, ಪ್ರತಿಭಟನಾಕಾರರು ತಮ್ಮ ಕಾರಿನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮಲಿಕ್ ಆರೋಪಿಸಿದರು.