ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಪುಟ ಪುನಾರಚನೆಯ ಬೆನ್ನಲ್ಲೇ ಅಸಮಾಧಾನಿತರ ಆಟ ಶುರುವಾಗಿದ್ದು, ಕೆಲ ಅಸಮಾಧಾನಿತ ಕಾಂಗ್ರೆಸ್ ಶಾಸಕರಿಂದ ಗುಪ್ತ್ ಗೇಮ್ಗೆ ಸ್ಕೆಚ್ ಹಾಕಲಾಗುತ್ತಿದೆ.
ಇಂದು ಬೆಂಗಳೂರಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನೇತೃತ್ವದಲ್ಲಿ ರಹಸ್ಯ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಅವರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ. ಆದ್ರೆ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
8ಕ್ಕೂ ಹೆಚ್ಚು ಕೈ ಶಾಸಕರು ರಮೇಶ್ ರಹಸ್ಯ ಸಭೆಯಲ್ಲಿ ಸೇರಲಿದ್ದಾರಾ ಅನ್ನೋ ಸಂದೇಹವೊಂದು ಇದೀಗ ಮೂಡಿಬರುತ್ತಿದ್ದು, ಸಭೆಯಲ್ಲಿ ಅಸಮಾಧಾನಿತರಿಂದ ಸ್ಪಷ್ಟವಾದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ ನಿಲುವುವನ್ನು ಇವತ್ತೇ ಸ್ಪಷ್ಟಪಡಿಸೋದಾ ಅಥವಾ ವಾರ ಕಾಯೋದಾ ಅನ್ನೋದರ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಇದನ್ನೂ ಓದಿ: ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕ್ರೀ ಬೇಕು – ಆಪ್ತರ ಬಳಿ ರಮೇಶ್ ಜಾರಕಿಹೊಳಿ ಮಾತು
ಈ ನಡುವೆ ಇಂದು ಸಂಜೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಹಲವರು ನಿರ್ಧಾರ ಮಾಡಿದ್ದಾರೆ. ಅಸಮಾಧಾನಿತ ಶಾಸಕ ನಾಗೇಂದ್ರ ಕೂಡ ಸಿದ್ದರಾಮಯ್ಯ ಭೇಟಿಗೆ ನಿರ್ಧರಿಸಿದ್ದು, ಮಾಜಿ ಸಿಎಂ ಭೇಟಿ ನಂತರ ಮತ್ತೊಂದು ಸುತ್ತಿನ ಮಾತುಕತೆಯನ್ನು ಅಸಮಾಧಾನಿತರು ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಒಟ್ಟಿನಲ್ಲಿ ರಾಜ್ಯ ರಾಜಕೀಯದಲ್ಲಿ ಅಸಮಾಧಾನಿತರ ನಡೆ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv