ಮುಂಬೈ: ಶ್ರೀದೇವಿ ನನ್ನ ಸ್ವಂತ ತಾಯಿಯಲ್ಲ. ಜಾಹ್ನವಿ ಕಪೂರ್ ನನ್ನ ಸ್ವಂತ ತಂಗಿಯಲ್ಲ ಎಂದು ಈ ಮೊದಲು ನಟ ಅರ್ಜುನ್ ಕಪೂರ್ ಹೇಳಿಕೆ ನೀಡಿದ್ದರು. ಆದರೆ ಶ್ರೀದೇವಿ ಜೊತೆಗೆ ಅರ್ಜುನ್ ಕಪೂರ್ ಉತ್ತಮ ಬಾಂಧವ್ಯ ಹೊಂದಿದ್ದರು ಎಂದೆನಿಸುತ್ತದೆ. ಹೀಗಾಗಿ ಅರ್ಜುನ್ ಕಪೂರ್ ಚಿಕ್ಕಮ್ಮ ಶ್ರೀದೇವಿ ಅವರ ಅಂತ್ಯಸಂಸ್ಕಾರ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ.
ಕಾರ್ಯಕ್ರಮವೊಂದರಲ್ಲಿ ಅರ್ಜುನ್ ಕಪೂರ್ ತಮ್ಮ ಹಾಗೂ ಶ್ರೀದೇವಿ ಮಧ್ಯೆ ಇರುವ ಸಂಬಂಧ ಉತ್ತಮವಾಗಿದೆ ಎಂದು ತಿಳಿಸಿದ್ದರು. ನನ್ನ ತಂದೆ ಬದುಕಿನಲ್ಲಿರುವ ಪ್ರತಿಯೊಂದು ವ್ಯಕ್ತಿಯನ್ನು ನಾನು ಗೌರವಿಸುತ್ತೇನೆ. ಏಕೆಂದರೆ ನನ್ನ ತಂದೆ ನನ್ನಿಂದ ಅದನ್ನು ನಿರೀಕ್ಷಿಸುತ್ತಾರೆ. ಹಾಗಾಗಿ ನಾನು ಶ್ರೀದೇವಿಯನ್ನು ಗೌರವಿಸುತ್ತೇನೆ. ಅವರಿಗೆ ಕೆಟ್ಟದನ್ನು ಬಯಸುವುದಿಲ್ಲ ಎಂದು ಅರ್ಜುನ್ ಕಪೂರ್ ಹೇಳಿದ್ದರು.
ಶ್ರೀದೇವಿ ಸಾವಿನ ಸಂದರ್ಭದಲ್ಲಿ ಅರ್ಜುನ್ ತಮ್ಮ ಕುಟುಂಬದ ಜೊತೆ ಇರಬೇಕೆಂದು ಮುಂಬೈಗೆ ಬಂದಿಳಿದಿದ್ದಾರೆ. ಕುಟುಂಬದ ಜೊತೆಯಿದ್ದು, ತಂಗಿ ಜಾಹ್ನವಿಗೆ ಸಾಂತ್ವಾನ ಹೇಳಲು ಮುಂಬೈಗೆ ಬಂದಿದ್ದಾರೆ. ಈ ವೇಳೆ ಶ್ರೀದೇವಿ ಮನೆ ಮುಂದೆ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಅರ್ಜುನ್ ಕಪೂರ್ ಬೋನಿ ಕಪೂರ್ ಹಾಗೂ ಅವರ ಮೊದಲನೇ ಪತ್ನಿ ಮೋನಾ ಕಪೂರ್ ಮಗ. ಬಳಿಕ ಬೋನಿ ಶ್ರೀದೇವಿಯನ್ನು ಮದುವೆಯಾಗಿದ್ದರು. ಶ್ರೀದೇವಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರ ಮಲಮಗ ಅರ್ಜುನ್ ಅಂತ್ಯಕ್ರಿಯೆ ಮಾಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
ಶ್ರೀದೇವಿ ಹೃದಯಾಘಾತದಿಂದ ದುಬೈಯಲ್ಲಿ ಶನಿವಾರ ರಾತ್ರಿ ಮೃತಪಟ್ಟರು. ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ.