ಬೆಂಗಳೂರು: ರಾಜ್ಯಕ್ಕೆ ಮತ್ತೊಂದು ಭೀಕರ ಕ್ಷಾಮ ಎದುರಾಗಲಿದೆ. ಮೇ ಹೋಗಿ ಜೂನ್ ಕೂಡ ಮುಗಿಯುತ್ತಾ ಬಂದಿದೆ. ಆದರೂ ರಾಜ್ಯದ ಹಲವೆಡೆ ಮಳೆಯಾಗುತ್ತಿಲ್ಲ. ಜಲಾಶಯಗಳಲ್ಲಿ ನೀರು ಕಾಣಿಸಿಕೊಂಡಿಲ್ಲ. ಬಿತ್ತನೆ ಕಾರ್ಯ ಆಗಿಲ್ಲ. ಹೀಗಾಗಿ ರಾಜ್ಯ ಮತ್ತೊಮ್ಮೆ ಭೀಕರ ಬರಗಾಲವನ್ನು ಎದುರಿಸಲು ಸಜ್ಜಾಗಬೇಕಾಗಿದೆ.
ರಾಜ್ಯದ 26 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ಕೆರೆ- ಕುಂಟೆಗಳು, ಜಲಾಶಯಗಳು ಒಣಗಿ ಹೋಗಿವೆ. ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಜೋರಾಗಿದೆ. ರೈತರು ಬಿತ್ತನೆ ಮಾಡಲು ಸಾಧ್ಯವಾಗದೇ ಪರದಾಡ್ತಿದ್ದಾರೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಮಳೆ ಪ್ರಮಾಣದಲ್ಲಿ ಭಾರೀ ಕುಸಿತವಾಗಿದೆ.
ರಾಜ್ಯದಲ್ಲಿ ಮತ್ತೆ ಭೀಕರ ಬರ?
ರಾಜ್ಯದಲ್ಲಿ ವಾಡಿಕೆಗಿಂತ ಶೇ.31ರಷ್ಟು ಕಡಿಮೆ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ಶೇ.47, ಮಲೆನಾಡು ಪ್ರದೇಶದಲ್ಲಿ ಶೇ.49ರಷ್ಟು ನೀರಿನ ಕೊರತೆಯಿದೆ. ಕಳೆದ ವರ್ಷ 145 ಟಿಎಂಸಿ ನೀರು ಹರಿದಿದ್ದು, ಈ ಬಾರಿ ಜೂನ್ ನಲ್ಲಿ ಕೇವಲ 6 ಟಿಎಂಸಿ ನೀರು ಮಾತ್ರ ಜಲಾಶಯಗಳಿಗೆ ಹರಿದು ಬಂದಿದೆ.
ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಳೆದ 46 ವರ್ಷಗಳಲ್ಲೇ ಕಡಿಮೆ ನೀರು ಸಂಗ್ರಹವಾಗಿದೆ. ಕಳೆದ ಬಾರಿ 54 ಟಿಎಂಸಿ ನೀರು, ಈ ಬಾರಿ 2.35 ಟಿಎಂಸಿ ನೀರು ಸಂಗ್ರಹವಾಗಿದೆ. ಜುಲೈನಲ್ಲಿ ವಾಡಿಕೆಯಷ್ಟು ಮಳೆ ಸುರಿದರೂ ಜಲಾಶಯಗಳು ತುಂಬುವುದು ಕಷ್ಟವಾಗಲಿದೆ. ಮಳೆಯ ಕೊರತೆಯಿಂದ ಅಂತರ್ಜಲ ಪ್ರಮಾಣ ಶೇ.85 ರಷ್ಟು ಕುಸಿತವಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೇ ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಕಷ್ಟವಾಗಲಿದೆ ಎಂಬುದಾಗಿ ತಿಳಿದುಬಂದಿದೆ.