ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಅಭಿಮಾನಿಗಳು ದಿನಗಳನ್ನು ಎಣಿಸುತ್ತಿದ್ದಾರೆ. ಆದರೆ ದರ್ಶನ್ ಅಪ್ಪಟ ಅಭಿಮಾನಿ ತಮ್ಮ ಜೀವನದ ಕೊನೆಯ ಅಂಚಿನಲ್ಲಿದ್ದಾರೆ.
ದರ್ಶನ್ ಅವರ ಅಪ್ಪಟ ಅಭಿಮಾನಿಯಾಗಿರುವ ರೇವಂತ್ ಎಲ್ಲರ ಹಾಗೆ ನೆಚ್ಚಿನ ಸ್ಟಾರ್ನ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿ ಆಗಬೇಕು ಎಂಬ ಆಸೆ ಇದೆ. ಆದರೆ ರೇವಂತ್ ಕ್ಯಾನ್ಸರ್ ನಿಂದಾಗಿ ಬದುಕಿನ ಕೊನೆಯ ಕ್ಷಣಗಳನ್ನ ಎಣಿಸುತ್ತಿದ್ದಾರೆ.
ಮೂಲತಃ ಶಿವಮೊಗ್ಗದವರಾದ ರೇವಂತ್ ತನ್ನ 20ನೇ ವಯಸ್ಸಿಗೆ ಕ್ಯಾನ್ಸರ್ ಕಾಯಿಲೆಯಿಂದ ನೋವು ಅನುಭವಿಸುತ್ತಿದ್ದಾರೆ. ಇವರಿಗೆ ತಮ್ಮ, ಅಕ್ಕ ಹಾಗೂ ಅಪ್ಪ ಅಮ್ಮ ಇದ್ದಾರೆ. ಶಿವಮೊಗ್ಗದಲ್ಲಿ ವಾಸವಿರುವ ರೇವಂತ್ ಸಾಕಷ್ಟು ದಿನಗಳ ಹಿಂದೆ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ನಂತರ ಬೆಂಗಳೂರಿಗೆ ಬಂದು ಚಿಕಿತ್ಸೆಯನ್ನು ಪಡೆದು ಹೋಗಿದ್ದರು. ಆದರೆ ಕ್ಯಾನ್ಸರ್ ಮತ್ತೆ ಕಾಣಿಸಿ ಉಲ್ಭಣಿಸಿದೆ.
ಪ್ರತಿ ವರ್ಷ ಫೆ.16ಕ್ಕೆ ರೇವಂತ್ ದರ್ಶನ್ ಹುಟ್ಟುಹಬ್ಬಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಶುಭ ಹಾರೈಸುತ್ತಿದ್ದರು. ಆದರೆ ಈ ವರ್ಷ ದರ್ಶನ್ ಭೇಟಿ ಮಾಡಲು ಸಾಧ್ಯವಿಲ್ಲ ಎಂದು ದುಖಃದಲ್ಲಿ ಇದ್ದಾರೆ. ವೈದ್ಯರು ಇನ್ನು ಮುಂದೆ ನಮ್ಮಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿರುವ ರೇವಂತ್ ಅವರ ಕಡೆಯ ಆಸೆಯಾಗಿ ದರ್ಶನ್ ಅವರನ್ನು ನೋಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ತಮ್ಮ ಪ್ರೀತಿಯ ಅಭಿಮಾನಿಯ ಕೊನೆ ಆಸೆಯನ್ನು ದಾಸ ದರ್ಶನ್ ಪೂರೈಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.