ಚಿಕ್ಕಮಗಳೂರು: ಪಶ್ಚಿಮ ಘಟ್ಟದ ತಪ್ಪಲಿನ ದತ್ತಪೀಠದ (Dattapeeta) ಬಳಿಯ ಅಪರೂಪದ ಶೋಲಾ ಅರಣ್ಯದಲ್ಲಿ (Shola Forest) ಕಾಡ್ಗಿಚ್ಚು (Wildfire) ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ದತ್ತಪೀಠ, ಮುಳ್ಳಯ್ಯನಗಿರಿ, ಕವಿಕಲ್ಗಂಡಿ ತಪ್ಪಲಿನಲ್ಲಿರುವ ಹಲವಾರು ಸಸ್ಯಗಳು ಸುಟ್ಟು ಕರಕಲಾಗಿವೆ.
ಸೋಮವಾರ (ಫೆ.17) ಸಂಜೆ ಕಾಣಿಸಿಕೊಂಡ ಬೆಂಕಿ ಸುಮಾರು ರಾತ್ರಿವರೆಗೂ ಹೊತ್ತಿ ಉರಿದಿದೆ. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆಗ್ನಿಶಾಮಕ ವಾಹನ ಹೋಗದ ಕಡೆಗಳಲ್ಲಿ ಅಧಿಕಾರಿಗಳು ಸೊಪ್ಪಿನ ರೆಂಬೆ ಹಾಗೂ ಕೆಲ ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಬಳಸಿ ರಾತ್ರಿ ವರೆಗೂ ಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.
ಈ ಅರಣ್ಯ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಮಾತ್ರ ಹೆಚ್ಚಾಗಿ ನೋಡಬಹುದು. ಈ ಕಾಡುಗಳು ನೀರನ್ನ ಹಿಡಿದಿಟ್ಟುಕೊಂಡು ವರ್ಷಪೂರ್ತಿ ಹರಿಸುತ್ತವೆ. ಶೋಲಾ ಅರಣ್ಯ ಇರುವ ಕಡೆ ಕಾಡು-ಕಾಡುಪ್ರಾಣಿಗಳು ಕೂಡ ಸಮೃದ್ಧವಾಗಿರುತ್ತವೆ. ಆದರೆ, ಕಾಡ್ಗಿಚ್ಚಿಗೆ ಶೋಲಾ ಕಾಡಿನ ಹಲವಾರು ಮರಗಳು ನಾಶವಾಗಿದೆ.
ಅರಣ್ಯಕ್ಕೆ ಬೆಂಕಿ ಹೇಗೆ ಬಿದ್ದಿದೆ ಎಂಬ ಸ್ಪಷ್ಟವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪ್ರವಾಸಿಗರು ಬೆಂಕಿ ಹಾಕಿರಬಹುದು ಅಥವಾ ಸಿಗರೇಟ್ನಿಂದ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.