ಮಂಡ್ಯ: ಕಾಡಿನಿಂದ ನಾಡಿಗೆ ಬಂದ ಆನೆಗಳು ಕೆರೆಯ ಕೆಸರಲ್ಲಿ ಸಿಲುಕಿ ಮೇಲೆ ಬರಲು ಹರಸಾಹಸಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾರು ನಾಲ್ಕು ಆನೆಗಳ ಹಿಂಡು ಶುಕ್ರವಾರದಿಂದ ಮಳವಳ್ಳಿ ತಾಲೂಕಿನ ಹಲವೆಡೆ ಓಡಾಡುತ್ತಿದ್ದು ಇಂದು ದೋರನಹಳ್ಳಿ ಗ್ರಾಮದ ಕೆರೆಯಲ್ಲಿ ಬೀಡು ಬಿಟ್ಟಿದ್ದವು. ಕೆರೆ ನೀರಿಲ್ಲದೆ ಒಣಗಿದ್ದು ಅಲ್ಲಲ್ಲಿ ಕೆಸರು ಮಯವಾಗಿತ್ತು. ಈ ವೇಳೆ ಆನೆ ಕೆರೆಯ ಕೆಸರಲ್ಲಿ ಸಿಲುಕಿ ಮೇಲೆ ಬರಲು ಹರಸಾಹಸ ಪಡುತ್ತಿತ್ತು.
ಆನೆಯನ್ನು ನೋಡಲು ಗ್ರಾಮಸ್ಥರು ಜಮಾಯಿಸುತ್ತಿದ್ದಂತೆ ಕೆಸರಿನಿಂದ ಹೊರಬಂದ ಆನೆ ತನ್ನ ಗುಂಪು ಸೇರಿಕೊಂಡಿದ್ದನ್ನು ನೋಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತ ಆನೆಗಳು ತಾವು ಹೋದಲೆಲ್ಲ ಬೆಳೆ ನಾಶ ಮಾಡುತ್ತಿದ್ದು ರೈತರು ಆತಂಕ ಪಡುತ್ತಿದ್ದಾರೆ.
ಸದ್ಯ ಸ್ಥಳಕ್ಕೆ ಕಿರುಗಾವಲು ಪೊಲೀಸರು ಆಗಮಿಸಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.