ಹಾಸನ: ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ಮುಂದುವರಿದಿದ್ದು, ಬೆಳ್ಳಂಬೆಳಗ್ಗೆ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಗ್ರಾಮದೊಳಗೆ ಆನೆಯೊಂದು ಎಂಟ್ರಿ ಕೊಟ್ಟಿದೆ.
ಕೆಂಚಮ್ಮನ ಹೊಸಕೋಟೆ ಬಳಿ ಅನೇಕ ಕಾಡಾನೆಗಳು ಇವೆ. ಆದರೆ ಇಂದು ಗ್ರಾಮದೊಳಗೆ ಏಕಾಏಕಿ ಒಂಟಿ ಸಲಗವೊಂದು ನುಗ್ಗಿದೆ. ಕಾಡಾನೆ ಕಂಡು ನಾಯಿಗಳು ಬೊಗಳಲು ಪ್ರಾರಂಭಿಸಿವೆ. ಇದನ್ನು ನೋಡಿದ ಒಂಟಿ ಸಲಗ ನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ತಕ್ಷಣ ಆನೆ ಕಂಡು ಗ್ರಾಮಸ್ಥರೆಲ್ಲರೂ ಜೀವಭಯದಿಂದ ಮನೆಯೊಳಗೆ ಓಡಿ ಹೋಗಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಗ್ರಾಮದೊಳಗೆ ಬಂದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗೆ ಅಟ್ಟಿದ್ದಾರೆ. ಸದ್ಯ ಆನೆ ಗ್ರಾಮದಿಂದ ಆಚೆ ಹೋಗಿದೆ. ಆದರೆ ಗ್ರಾಮದ ಸುತ್ತಮುತ್ತಲೇ ಓಡಾಡುತ್ತಿದೆ. ಇತ್ತ ಸಲೇಶಪುರ ತಾಲೂಕಿನ ಪಾರ್ವತಮ್ಮನ ಬೆಟ್ಟದ ಬಳಿ ಮತ್ತೊಂದು ಸಲಗ ಬೀಡು ಬಿಟ್ಟಿದೆ.
ಸೊಂಡಲಿನಿಂದ ಮೈಮೇಲೆ ಮಣ್ಣು ಎರಚಿಕೊಳ್ಳುತ್ತಾ ಅದು ಕೂಡ ಗ್ರಾಮದ ಕಡೆಗೆ ಬರುತ್ತಿದೆ. ಸದ್ಯಕ್ಕೆ ಗ್ರಾಮದೊಳಗೆ ಆನೆ ಪ್ರವೇಶಿಸದಂತೆ ತಡೆಯಲು ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಮಲೆನಾಡು ಭಾಗದ ಜನತೆ ಕಾಡಾನೆ ಸಮಸ್ಯೆಯಿಂದ ಹೈರಾಣಾಗಿದ್ದು, ಸದ್ಯಕ್ಕೆ ಕಾಡಾನೆಗಳ ಚಲನದ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದ್ದಾರೆ.
https://www.youtube.com/watch?v=ASl1gJeq2m0